ನವದೆಹಲಿ: ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂನಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯವನ್ನು ನಡೆಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಗಡುವು ನೀಡಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ನೇತೃತ್ವದ ಪೀಠವು ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದೆ.
ಈ ರಾಜ್ಯಗಳಲ್ಲಿ ಮರುವಿಂಗಡಣೆ ಕಾರ್ಯವನ್ನು ಮುಂದೂಡಿದ್ದನ್ನು ರದ್ದುಪಡಿಸಿ ರಾಷ್ಟ್ರಪತಿ 2020ರಲ್ಲಿ ಆದೇಶ ಹೊರಡಿಸಿದ್ದರು. ಹೀಗಿದ್ದರೂ ಮರುವಿಂಗಡಣೆ ಕಾರ್ಯದಲ್ಲಿ ವಿಳಂಬ ಆಗಿರುವುದಕ್ಕೆ ಕೋರ್ಟ್ ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು.
‘ಮರುವಿಂಗಡಣೆ ಮುಂದೂಡಿದ್ದನ್ನು ರದ್ದುಪಡಿಸಿ ರಾಷ್ಟ್ರಪತಿ ಆದೇಶಿಸಿದರೆ ಕೆಲಸ ಆರಂಭಿಸಲು ಅಷ್ಟೇ ಸಾಕಾಗುತ್ತದೆ. ಇಲ್ಲಿ ಸರ್ಕಾರಕ್ಕೆ ಏನು ಕೆಲಸ’ ಎಂದು ಪೀಠವು ಪ್ರಶ್ನಿಸಿತು.
ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಸಮಾಲೋಚನೆ ನಡೆಯುತ್ತಿದೆ. ಆದರೆ ಮಣಿಪುರದಲ್ಲಿ ಹಿಂಸಾಚಾರದ ಕಾರಣದಿಂದಾಗಿ ಪರಿಸ್ಥಿತಿ ಅನುಕೂಲಕರವಾಗಿ ಇಲ್ಲ ಎಂದು ಕೇಂದ್ರ ಸರ್ಕಾರ ವಿವರಿಸಿತು.
ಪ್ರಜಾ ಪ್ರಾತಿನಿಧ್ಯ ಕಾಯ್ದೆ – 1950ರ ಅಡಿಯಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ನಿರ್ದಿಷ್ಟ ಸೂಚನೆ ಬರಬೇಕು ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.