ಸುಪ್ರೀಂ ಕೋರ್ಟ್
ನವದೆಹಲಿ: 40 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ 23 ವರ್ಷದ ಸಾಮಾಜಿಕ ಮಾಧ್ಯಮ ಇನ್ಫ್ಲುಯನ್ಸರ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿ ಬುಧವಾರ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಸತೀಶ್ ಚಂದ್ರ ಶರ್ಮಾ ಅವರು ಇದ್ದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ, ‘ವ್ಯಕ್ತಿ ವಿರುದ್ಧ ಆರೋಪ ಮಾಡಿರುವ ಮಹಿಳೆ ಮಗು ಅಲ್ಲ. ಅಲ್ಲದೇ, ಒಂದು ಕೈಯಿಂದ ಚಪ್ಪಾಳೆ ಸಾಧ್ಯ ಇಲ್ಲ’ ಎಂದು ಹೇಳಿದೆ.
‘ಆರೋಪಿಯನ್ನು ಜೈಲಿನಲ್ಲಿರಿಸಿ 9 ತಿಂಗಳು ಗತಿಸಿದ್ದರೂ ಆತನ ವಿರುದ್ಧ ಆರೋಪ ನಿಗದಿ ಮಾಡಿಲ್ಲ’ ಎಂದೂ ಹೇಳಿದೆ.
‘ಮಹಿಳೆಯೇನೂ ಸಣ್ಣ ಮಗುವಲ್ಲ. ಆಕೆಗೆ 40 ವರ್ಷವಾಗಿದ್ದು, ಇಬ್ಬರೂ ಜೊತೆಯಾಗಿ ಜಮ್ಮುವಿಗೆ ಹೋಗಿದ್ದಾರೆ. ಮಹಿಳೆ 7 ಬಾರಿ ಆರೋಪಿ ಜೊತೆ ಜಮ್ಮುವಿಗೆ ಹೋಗಿದ್ದರೂ ಆ ಬಗ್ಗೆ ಆಕೆಯ ಪತಿ ತಲೆಕೆಡಿಸಿಕೊಂಡಿಲ್ಲ. ಹೀಗಿರುವಾಗ ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಿಸಿದ್ದು ಏಕೆ’ ಎಂದು ದೆಹಲಿ ಪೊಲೀಸರನ್ನು ನ್ಯಾಯಪೀಠ ಪ್ರಶ್ನಿಸಿದೆ.
‘ಇಂತಹ ವ್ಯಕ್ತಿಗಳಿಂದ ಯಾರು ಪ್ರೇರಣೆ ಪಡೆಯುತ್ತಾರೆ?’ ಎಂದು ಆರೋಪಿ ಕುರಿತು ಪೀಠವು ಹೇಳಿದೆ.
ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಆರೋಪಿ ತನಗೆ ದೊರೆತ ಈ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಬಾರದು, ದೂರುದಾರ ಮಹಿಳೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡಬಾರದು ಎಂದು ಸೂಚಿಸಿದೆ.
ಪ್ರಕರಣ: ದೂರುದಾರ ಮಹಿಳೆಯು 2021ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿ ಸಂಪರ್ಕಕ್ಕೆ ಬಂದಿದ್ದರು. ತಾನು ಮಾರಾಟ ಮಾಡುವ ಬಟ್ಟೆಗಳ ಬ್ರ್ಯಾಂಡ್ಗೆ ಪ್ರಚಾರ ನೀಡುವಂತೆ ಕೋರಿದ್ದರು.
‘ಕೆಲ ದಿನಗಳ ನಂತರ, ಭಿನ್ನಾಭಿಪ್ರಾಯಗಳಿಂದಾಗಿ ಆತನೊಂದಿಗಿನ ವ್ಯಾವಹಾರಿಕ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
‘2021ರ ಡಿಸೆಂಬರ್ನಲ್ಲಿ ಕನಾಟ್ ಪ್ಲೇಸ್ಗೆ ತೆರಳಿ, ಬ್ರ್ಯಾಂಡ್ವೊಂದರ ಚಿತ್ರೀಕರಣಕ್ಕೆ ಹೋಗಲು ಆರೋಪಿ ಮನವೊಲಿಸಿದ್ದ. ಪ್ರಯಾಣದ ವೇಳೆ, ಅಮಲು ಬರಿಸುವ ಪದಾರ್ಥಗಳನ್ನು ಲೇಪಿಸಿದ್ದ ಸಿಹಿಖಾದ್ಯಗಳನ್ನು ನೀಡಿದ್ದ. ಅವುಗಳನ್ನು ಸೇವಿಸಿದ ನಂತರ ನನಗೆ ಪ್ರಜ್ಞೆ ತಪ್ಪಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
‘ಹಿಂದೂ ರಾವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಆರೋಪಿಯು ನನ್ನನ್ನು ಆಸ್ಪತ್ರೆ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನನ್ನ ಹಣವನ್ನು ಕದ್ದ. ನಾನು ನಗ್ನಳಾಗಿರುವ ಫೋಟೊಗಳನ್ನು ಸೆರೆಹಿಡಿದ’ ಎಂದೂ ಮಹಿಳೆ ದೂರಿದ್ದಾರೆ.
‘ನಂತರ ನನ್ನನ್ನು ಬಲವಂತದಿಂದ ಜಮ್ಮುವಿಗೆ ಕರೆದುಕೊಂಡು ಹೋಗಿದ್ದಲ್ಲದೇ, ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ, ಸುಲಿಗೆ ಮಾಡಿದ್ದಾನೆ. ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಬೆದರಿಕೆ ಹಾಕುತ್ತಾ ಬಂದಿದ್ದಾನೆ’ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.