ADVERTISEMENT

ಅಲ್ಪಸಂಖ್ಯಾತರ ಘೋಷಣೆ: ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಸಮಯ ನೀಡಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 17:33 IST
Last Updated 28 ಮಾರ್ಚ್ 2022, 17:33 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಅಲ್ಪಸಂಖ್ಯಾತರ ಕುರಿತು ಅಧಿಸೂಚನೆ ಹೊರಡಿಸುವ ಕೇಂದ್ರದ ಅಧಿಕಾರ ಪ್ರಶ್ನಿಸಿ ಹಾಗೂ ಹಿಂದೂಗಳು ಕಡಿಮೆ ಸಂಖ್ಯೆಯಲ್ಲಿರುವ ರಾಜ್ಯಗಳು ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎಂದು ಕೋರಿದ ಅರ್ಜಿ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೋಮವಾರ ಮತ್ತಷ್ಟು ಅವಕಾಶ ನೀಡಿತು.

‘ರಾಜ್ಯಗಳಲ್ಲಿ ಹಿಂದೂಗಳು ಅಥವಾ ಇತರ ಧರ್ಮದವರು ಕಡಿಮೆ ಸಂಖ್ಯೆಯಲ್ಲಿ ಇದ್ದರೆ, ರಾಜ್ಯಗಳು ಅಂತಹವರನ್ನು ತಮ್ಮ ಪ್ರಾದೇಶಿಕ ವ್ಯಾಪ್ತಿಯೊಳಗೆ ಅಲ್ಪಸಂಖ್ಯಾತರು ಎಂದು ಘೋಷಿಸಬಹುದು’ ಎಂಬುದಾಗಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

‘ಅಲ್ಪಸಂಖ್ಯಾತರ ಸಚಿವಾಲಯ ಸಲ್ಲಿಸಿರುವ ಈ ಪ್ರತಿಕ್ರಿಯೆಯ ಪ್ರತಿ ನನಗೆ ಲಭಿಸಿದ್ದು, ಇನ್ನೂ ಓದಿಲ್ಲ. ಹೀಗಾಗಿ ನನಗೆ ಸರ್ಕಾರದ ನಿಲುವು ಏನು ಎಂಬುದು ಗೊತ್ತಿಲ್ಲ’ ಎಂದು ನ್ಯಾಯಮೂರ್ತಿ ಸಂಜಯಕಿಶನ್‌ ಕೌಲ್‌ ನೇತೃತ್ವದ ಪೀಠಕ್ಕೆ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ತಿಳಿಸಿದರು.

ADVERTISEMENT

‘ಸಚಿವಾಲಯವು ಸುಪ್ರೀಂಕೋರ್ಟ್‌ಗೆ ನೀಡಿರುವ ಉತ್ತರವನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿವೆ’ ಎಂದು ನ್ಯಾಯಪೀಠ ಹೇಳಿತು.

‘ಸಚಿವಾಲಯ ನೀಡಿರುವ ಉತ್ತರವನ್ನು ನಾನು ಓದಿಲ್ಲ. ಹಾಗಾಗಿ, ಈ ವಿಷಯವಾಗಿ ಪ್ರತಿಕ್ರಿಯೆ ಸಲ್ಲಿಸಲು ನನಗೆ ಮತ್ತಷ್ಟು ಸಮಯ ನೀಡಬೇಕು’ ಎಂದು ಮೆಹ್ತಾ ಮನವಿ ಮಾಡಿದರು.

ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.