ಝೀ ನ್ಯೂಸ್ ಸಂಪಾದಕ ಅಹುಜಾ ಬಂಧನಕ್ಕೆ ಸುಪ್ರೀಂ ಕೋರ್ಟ್ ತಡೆ
ರಾಹುಲ್ ಗಾಂಧಿ ವಿರುದ್ಧ ತಿರುಚಿದ ವಿಡಿಯೊ ಪ್ರಸಾರ ಪ್ರಕರಣ
ಪ್ರಜಾವಾಣಿ ವಾರ್ತೆ Published 5 ಆಗಸ್ಟ್ 2022, 14:19 IST Last Updated 5 ಆಗಸ್ಟ್ 2022, 14:19 IST ಸುಪ್ರೀಂ ಕೋರ್ಟ್
ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದ ಟೇಲರ್ ಕನ್ಹಯ್ಯಾ ಲಾಲ್ ಹತ್ಯೆಯ ಆರೋಪಿಗಳನ್ನು ಕ್ಷಮಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮನವಿ ಮಾಡಿದ್ದಾರೆ ಎಂದು ತಿರುಚಲಾಗಿರುವ ವಿಡಿಯೊ ಪ್ರಸಾರ ಮಾಡಿದ್ದ ಪ್ರಕರಣದಲ್ಲಿ ಝೀ ನ್ಯೂಸ್ ಸಂಪಾದಕ ರಜ್ನೀಶ್ ಅಹುಜಾ ಅವರನ್ನು ಬಂಧಿಸದಂತೆ ಸುಪ್ರೀಂಕೋರ್ಟ್ ಶುಕ್ರವಾರ ರಕ್ಷಣೆ ನೀಡಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಬಂಧನಕ್ಕೆ ತಡೆ ಕೋರಿರುವ ಅಹುಜಾ ಅರ್ಜಿ ಬಗ್ಗೆ ಛತ್ತೀಸಗಢ ಮತ್ತು ರಾಜಸ್ಥಾನ ಸರ್ಕಾರಗಳಿಂದ ಪ್ರತಿಕ್ರಿಯೆಯನ್ನು ಕೇಳಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ದಾವೆ ಅವರ ವಾದ ಆಲಿಸಿದ ಕೋರ್ಟ್, ಅಹುಜಾ ವಿರುದ್ಧ ಈಗಾಗಲೇ ದಾಖಲಾಗಿರುವ ಅಥವಾ ಭವಿಷ್ಯದಲ್ಲಿ ದಾಖಲಾಗುವ ಎಫ್ಐಆರ್ ಆಧಾರದಲ್ಲಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತಿಲ್ಲ ಎಂದು ಆದೇಶ ನೀಡಿದೆ.
ಇದಕ್ಕೂ ಮುನ್ನ ಇದೇ ಪ್ರಕರಣದಲ್ಲಿ ಝೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ಅವರನ್ನೂ ಬಂಧಿಸದಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.