ನವದೆಹಲಿ (ಪಿಟಿಐ): ದೇಶದಲ್ಲಿ ಎಚ್ಐವಿ ಪೀಡಿತರ ಚಿಕಿತ್ಸೆಗಾಗಿ ಬಳಸಲಾಗುವಆ್ಯಂಟಿರೆಟ್ರೊವೈರಲ್ ಔಷಧಿಯ ಕೊರತೆ ಇದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇಂಡಿಯನ್ ನೆಟ್ವರ್ಕ್ ಫಾರ್ ಪೀಪಲ್ ಲಿವಿಂಗ್ ವಿಥ್ ಎಚ್ಐವಿ/ಏಡ್ಸ್ ಎಂಬ ಸ್ವಯಂ ಸೇವಾ ಸಂಸ್ಥೆ (ಎನ್ಜಿಒ) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಇತರರಿಗೆ ಸೂಚಿಸಿದೆ.
‘ದೇಶದಲ್ಲಿ ಆ್ಯಂಟಿರೆಟ್ರೊವೈರಲ್ ಔಷಧಿಯ ದಾಸ್ತಾನು ಇಲ್ಲ ಎಂದು ಅರ್ಜಿದಾರರು ದೂರಿದ್ದಾರೆ. 2021–22ನೇ ಸಾಲಿನ ಟೆಂಡರ್ ಅನ್ನು 2021ರ ಆಗಸ್ಟ್ನಲ್ಲಿ ಕರೆಯಬೇಕಾಗಿತ್ತು. ಆದರೆ ಅದನ್ನು 2021ರ ಡಿಸೆಂಬರ್ನಲ್ಲಿ ಕರೆಯಲಾಯಿತು. ಅದು ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಿ’ ಎಂದು ನ್ಯಾಯಪೀಠವು ನಿರ್ದೇಶಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.