ADVERTISEMENT

ಛತ್ತೀಸಗಡ: ಅಮಾನತುಗೊಂಡ ಐ‍ಪಿಎಸ್‌ ಅಧಿಕಾರಿಗೆ ಬಂಧನದಿಂದ ರಕ್ಷಣೆ

ಪಿಟಿಐ
Published 26 ಆಗಸ್ಟ್ 2021, 8:56 IST
Last Updated 26 ಆಗಸ್ಟ್ 2021, 8:56 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಅಮಾನತುಗೊಂಡ ಹಿರಿಯ ಐಪಿಎಸ್‌ ಅಧಿಕಾರಿ ಗುರ್ಜಿಂದರ್‌ ಪಾಲ್‌ ಸಿಂಗ್‌ ಅವರಿಗೆ ಗುರುವಾರ ಸುಪ್ರೀಂಕೋರ್ಟ್‌ ಬಂಧನದಿಂದ ರಕ್ಷಣೆ ನೀಡಿದೆ.

ಛತ್ತೀಸಗಡ ಸರ್ಕಾರವು ಗುರ್ಜಿಂದರ್‌ ಪಾಲ್‌ ಸಿಂಗ್‌ ವಿರುದ್ಧ ಅಕ್ರಮ ಆಸ್ತಿ ಸಂಗ್ರಹ ಮತ್ತು ದೇಶದ್ರೋಹ ಆರೋಪಕ್ಕೆ ಸಂಬಂಧಿಸಿದಂತೆ ಎರಡು ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಅವರನ್ನು ಒಳಗೊಂಡ ಪೀಠವು ‘ಅಮಾನತುಗೊಂಡ ಹಿರಿಯ ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ಅವರನ್ನು ಬಂಧಿಸದಂತೆ’ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಜತೆಗೆ, ಪೊಲೀಸರೊಂದಿಗೆ ತನಿಖೆಗೆ ಸಹಕರಿಸುವಂತೆ ಗುರ್ಜಿಂದರ್‌ ಸಿಂಗ್‌ಗೂ ಸೂಚಿಸಿದೆ.

ADVERTISEMENT

‘ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಪೊಲೀಸ್‌ ಅಧಿಕಾರಿಗಳು ಆ (ಆಡಳಿತ) ಪಕ್ಷದ ಪರವಾಗಿರುತ್ತಾರೆ. ಬಳಿಕ, ಮತ್ತೊಂದು ಹೊಸ ಪಕ್ಷ ಅಧಿಕಾರಕ್ಕೆ ಬಂದಾಗ, ಸರ್ಕಾರವು ಹಿಂದಿನ ಸರ್ಕಾರಕ್ಕೆ ಬೆಂಬಲ ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದೊಂದು ಪ್ರವೃತ್ತಿಯಂತೆ ಬೆಳೆದು ಬಂದಿದೆ. ಇದಕ್ಕೆ ಪೊಲೀಸ್‌ ಇಲಾಖೆಯೂ ಕಾರಣ. ಈ ಪ್ರವೃತ್ತಿ ನಿಲ್ಲಬೇಕು’ ಎಂದು ಪೀಠ ಹೇಳಿದೆ.

‘ಗುರ್ಜಿಂದರ್‌ ಪಾಲ್‌ ಸಿಂಗ್‌ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸದಂತೆ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳಿಗೆ ನಾಲ್ಕು ವಾರಗಳೊಳಗೆ ತನ್ನ ನಿಲುವನ್ನು ಛತ್ತೀಸಗಡ ಸರ್ಕಾರ ಸಲ್ಲಿಸಬೇಕು. ಅಲ್ಲಿಯವರೆಗೆ ಗುರ್ಜಿಂದರ್‌ ಪಾಲ್‌ ಅವರನ್ನು ಬಂಧಿಸುವಂತಿಲ್ಲ’ ಎಂದು ನ್ಯಾಯಾಲಯವು ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.