ADVERTISEMENT

ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್‌ನ ಟೀಕೆಗಳನ್ನು ತೆಗೆದುಹಾಕಲಾಗದು: ಸುಪ್ರೀಂ

ಪಿಟಿಐ
Published 6 ಮೇ 2021, 9:03 IST
Last Updated 6 ಮೇ 2021, 9:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಲು ಚುನಾವಣಾ ಆಯೋಗ ಕಾರಣ ಎಂಬ ಮದ್ರಾಸ್‌ ಹೈಕೋರ್ಟ್‌ನ ವಿಮರ್ಶಾತ್ಮಕ ಟೀಕೆಗಳನ್ನು ನ್ಯಾಯಾಂಗದ ಆದೇಶದಿಂದ ತೆಗೆದು ಹಾಕಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಇದೇ ವೇಳೆ ಮಾಧ್ಯಮಗಳು ನ್ಯಾಯಾಂಗ ವಿಚಾರಣೆ ಕುರಿತ ಅವಲೋಕನಗಳನ್ನು ವರದಿ ಮಾಡದಂತೆ ನಿರ್ಬಂಧ ಹೇರಬೇಕಂಬ ಮನವಿಯನ್ನು ತಿರಸ್ಕರಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ‘ಹೈಕೋರ್ಟ್‌ ನೀಡಿರುವ ಪ್ರತಿಕ್ರಿಯೆ ಕಟುವಾಗಿರಬಹುದು. ಆದರೆ, ಆ ಪ್ರತಿಕ್ರಿಯೆಗಳು ನ್ಯಾಯಾಂಗದ ಆದೇಶದ ಭಾಗವಾಗಿದ್ದು, ಅವುಗಳನ್ನು ಆದೇಶದಿಂದ ತೆಗದು ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.

ADVERTISEMENT

ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುವುದು ಮಾಧ್ಯಮದ ಹಕ್ಕು ಎಂದು ಪ್ರತಿಪಾದಿಸಿರುವ ನ್ಯಾಯಪೀಠ, ‘ಇಂಥ ಕಟುವಾದ ಪ್ರತಿಕ್ರಿಯೆಗಳನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ‘ ಎಂದು ಹೇಳಿದೆ.

ಕೋವಿಡ್‌ 19 ಸಾಂಕ್ರಾಮಿಕದ ಅವಧಿಯಲ್ಲಿ ಹೈಕೋರ್ಟ್‌ಗಳು ಮಾಡಿರುವ ಕಾರ್ಯವನ್ನು ನ್ಯಾಯಪೀಠ ಶ್ಲಾಘಿಸಿದೆ. ಸಾಂಕ್ರಾಮಿಕ ರೋಗದ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಉಸ್ತುವಾರಿ ಮಾಡಿವೆ ಎಂದು ಹೇಳಿದೆ.ಚಂದ್ರಚೂಡ್ ನೇತೃತ್ವದ ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಎಂ. ಆರ್.ಶಾ ಇದ್ದಾರೆ.

ಮದ್ರಾಸ್ ಹೈಕೋರ್ಟ್‌ ಮಾಡಿರುವ ಟೀಕೆಗಳನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಂತರ ನ್ಯಾಯಪೀಠ ಈ ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.