ADVERTISEMENT

ಬಫರ್ ವಲಯದಲ್ಲಿ ಕಟ್ಟಡ; ತೀರ್ಪು ಕಾಯ್ದಿರಿಸಿದ ಸುಪ್ರೀಂ

ಪಿಟಿಐ
Published 8 ಆಗಸ್ಟ್ 2020, 12:24 IST
Last Updated 8 ಆಗಸ್ಟ್ 2020, 12:24 IST
   

ನವದೆಹಲಿ: ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡ ನಿರ್ಮಿಸುವ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಮತ್ತು ವಂಡರ್ ಪ್ರಾಜೆಕ್ಟ್ ಡೆವಲಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಯೋಜನೆಗೆ ತಡೆನೀಡಿದ್ದ ಎನ್.ಜಿ.ಟಿ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಶನಿವಾರ ಕಾಯ್ದಿರಿಸಿದೆ.

ಅರ್ಜಿಗೆ ಸಂಬಂಧಿಸಿದ ಪರ, ವಿರೋಧ ವಾದ ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮತ್ತು ನ್ಯಾಯಮೂರ್ತಿ ವಿ.ಬಾಲಸುಬ್ರಹ್ಮಣಿಯನ್ ಅವರಿದ್ದ ಪೀಠವು ಆದೇಶವನ್ನು ಕಾಯ್ದಿರಿಸಿತು. ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಹಿಂದೆ ಕೇಂದ್ರ, ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಉದ್ದೇಶಿತ ಕಟ್ಟಡದ ನಿರ್ಮಾಣ ಬೆಂಗಳೂರಿನ ಕೈಕೊಂಡರಹಳ್ಳಿ ಕೆರೆಯ ಬಫರ್ ವಲಯ ವ್ಯಾಪ್ತಿಯಲ್ಲಿದೆ. ಇದು, ನಿಯಮದ ಉಲ್ಲಂಘನೆ ಎಂದು ಪ್ರತಿಪಾದಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್.ಜಿ.ಟಿ) ನಿರ್ಮಾಣ ಕಾರ್ಯಕ್ಕೆ ತಡೆ ನೀಡಿತ್ತು. ಇದನ್ನು ವಂಡರ್ ಪ್ರಾಜೆಕ್ಟ್ಸ್ ಡೆವಲಪಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರಶ್ನಿಸಿತ್ತು.

ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆ ವರ್ತೂರು ಹೋಬಳಿಯ ಕಸವನಹಳ್ಳಿಯಲ್ಲಿ ಉದ್ದೇಶಿತ ಕಟ್ಟಡ ನಿರ್ಮಾಣಕ್ಕಾಗಿ ಅನುಮೋದನೆ ನೀಡಿದ್ದ (ಎನ್ವಿರಾಮೆಂಟಲ್ ಕ್ಲಿಯರೆನ್ಸ್) ರಾಜ್ಯದ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಎಚ್.ಪಿ.ರಾಜಣ್ಣ ಅವರು ಎನ್.ಜಿ.ಟಿಗೆ ಅರ್ಜಿ ಸಲ್ಲಿಸಿದ್ದರು.

ಕಟ್ಟಡ ನಿರ್ಮಾಣ ಬಫರ್ ವಲಯದಲ್ಲಿ ಬರಲಿದೆ. ಅಲ್ಲದೆ, ಒಂದು ಮುಖ್ಯ ಮತ್ತು ಎರಡು ಉಪ ರಾಜಕಾಲುವೆಗಳು ಬರಲಿವೆ ಎಂದು ರಾಜಣ್ಣ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.