ನೋಯ್ಡಾ (ಉತ್ತರ ಪ್ರದೇಶ): ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕ್ಷೀಣಿಸುತ್ತಿರುವುದರಿಂದ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳಲ್ಲಿ ರಜೆ ನೀಡಲು ನೋಯ್ಡಾ ಮತ್ತು ಗಾಜಿಯಾಬಾದ್ ಜಿಲ್ಲಾಡಳಿತ ನಿರ್ಧರಿಸಿವೆ.
ಗೌತಮ ಬುದ್ಧ ನಗರ ಮತ್ತು ಗಾಜಿಯಾಬಾದ್ ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ನ.10ರವರೆಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿ ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಸಮ-ಬೆಸ ಸಂಖ್ಯೆಯ ಟ್ರಾಫಿಕ್ ನಿಯಮ ಜಾರಿ:
ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವುದರಿಂದ ನ.13 ರಿಂದ ನ.20 ರವರೆಗೆ ಸಮ-ಬೆಸ ಸಂಖ್ಯೆಯ ಟ್ರಾಫಿಕ್ ಯೋಜನೆ ಜಾರಿಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.
ವಾಹನಗಳ ನಂಬರ್ ಪ್ಲೇಟ್ನ ಕೊನೆಯ ಅಂಕಿಗಳ ಆಧಾರದ ಮೇಲೆ ಈ ನಿಯಮವನ್ನು ಜಾರಿ ಮಾಡಲಾಗುತ್ತದೆ. ಇದರ ಅಡಿಯಲ್ಲಿ ಬೆಸ ಅಂಕಿಗಳಲ್ಲಿ (1,3,5,7,9) ಕೊನೆಗೊಳ್ಳುವ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಬೆಸ ದಿನಾಂಕಗಳಲ್ಲಿ ಸಮ ಸಂಖ್ಯೆಗಳನ್ನು(0,2,4,6,8)ಹೊಂದಿರುವ ವಾಹನಗಳು ಸಮ ದಿನಾಂಕಗಳಲ್ಲಿ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸಲಾಗುತ್ತದೆ.
ಕೃಷಿತ್ಯಾಜ್ಯ ಸುಡುವುದು ನಿಲ್ಲಿಸಿ-ಸುಪ್ರೀಂ ಕೋರ್ಟ್ :
ದೆಹಲಿ–ಎನ್ಸಿಆರ್ನಲ್ಲಿ ಗಾಳಿ ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.