ADVERTISEMENT

ಭಾರತ–ಪಾಕಿಸ್ತಾನ ಪಂದ್ಯ: ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 8:24 IST
Last Updated 25 ಅಕ್ಟೋಬರ್ 2021, 8:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ (ಪಿಟಿಐ): ಭಾರತ ಮತ್ತು ಪಾಕಿಸ್ತಾನದ ನಡುವೆ ಭಾನುವಾರ ನಡೆದ ಟಿ–20 ವಿಶ್ವಕಪ್‌ ಪಂದ್ಯಾವಳಿಯ ನಂತರ ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಉತ್ತರ ಪ್ರದೇಶ, ಬಿಹಾರ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

ಭಾನುವಾರ ರಾತ್ರಿಯ ಪಂದ್ಯದ ನಂತರ ಕೆಲವು ಘೋಷಣೆಗಳು ಕೇಳಿದ್ದವು. ನಂತರದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಭಾಯಿ ಗುರುದಾಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಕೆಲವು ಕಾಶ್ಮೀರಿ, ಉತ್ತರ ಪ್ರದೇಶ ಮತ್ತು ಬಿಹಾರದ ವಿದ್ಯಾರ್ಥಿಗಳು ತಮ್ಮ ಕೊಠಡಿಗಳಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದರು.ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿತು. ನಂತರದಲ್ಲಿ ವಿದ್ಯಾರ್ಥಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ADVERTISEMENT

ಉತ್ತರ ಪ್ರದೇಶದ ಕೆಲವು ವಿದ್ಯಾರ್ಥಿಗಳು ತಮ್ಮ ಕೊಠಡಿಗೆ ನುಗ್ಗಿದ್ದಾರೆ ಎಂದು ಕಾಶ್ಮೀರಿ ವಿದ್ಯಾರ್ಥಿಯೊಬ್ಬ ಆರೋಪಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

‘ನಾವು ಇಲ್ಲಿ ಪಂದ್ಯವನ್ನು ನೋಡುತ್ತಿದ್ದೆವು. ಉತ್ತರ ಪ್ರದೇಶದ ಕೆಲವು ವಿದ್ಯಾರ್ಥಿಗಳು ಬಲವಂತವಾಗಿ ಒಳಗೆ ನುಗ್ಗಿದರು. ನಾವು ಇಲ್ಲಿ ಅಧ್ಯಯನಕ್ಕೆ ಬಂದಿದ್ದೇವೆ, ಜಗಳಕ್ಕಲ್ಲ’ ಎಂದು ವಿದ್ಯಾರ್ಥಿಯು ತನ್ನ ಕೊಠಡಿಗೆ ಆಗಿರುವ ಹಾನಿಯನ್ನು ತೋರಿಸುತ್ತ ವಿಡಿಯೊದಲ್ಲಿ ಆರೋಪಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.