ನವದೆಹಲಿ: ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಹಿಂದೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಕೈವಾಡ ಇರುವ ಸಾಧ್ಯತೆಯ ಬಗ್ಗೆಯೂ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಅಮಾಯಕ ಜನರನ್ನು ಹತ್ಯೆ ಮಾಡುವ ಮೂಲಕ ಸ್ಥಳೀಯರಲ್ಲಿ ಭೀತಿ ಸೃಷ್ಟಿಸುವ ಸಂಚು ಇದರ ಹಿಂದಿದೆ. ಹರ್ಕಾತ್ 313, ‘ಯುನೈಟೆಡ್ ಲಿಬರೇಷನ್ ಆಫ್ ಜಮ್ಮು ಆ್ಯಂಡ್ ಕಾಶ್ಮೀರ್’, ‘ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್)’ನಂತಹ ಹೊಸ ಉಗ್ರ ಸಂಘಟನೆಗಳ ಎನ್ಕ್ರಿಪ್ಟೆಡ್ ಸಂದೇಶಗಳನ್ನು ಡಿಕೋಡ್ ಮಾಡಿದಾಗ ದೊರೆತ ಮಾಹಿತಿಗಳಿಂದಲೂ ಈ ಸುಳಿವು ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಈ ಹೊಸ ಉಗ್ರ ಸಂಘಟನೆಗಳು ಲಷ್ಕರ್ ಎ ತಯ್ಯಬಾ, ಹಿಜ್ಬುಲ್ ಮುಜಾಹಿದೀನ್ನಂಥ ಭಯೋತ್ಪಾದಕ ಸಂಘಟನೆಗಳ ಹೊಸ ವಿಭಾಗಗಳು ಎಂದೇ ಪರಿಗಣಿಸಲಾಗಿದೆ.
ಭದ್ರತಾಪಡೆಗಳ ಕೈಗೆ ಸಿಗದಂತೆ ದುಷ್ಕೃತ್ಯಗಳನ್ನು ಎಸಗಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹೊಸ ತಂತ್ರವನ್ನು ಅನುಸರಿಸುತ್ತಿವೆ. ಈವರೆಗೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಂಡಿಲ್ಲದವರನ್ನೇ ಬಳಸಿಕೊಳ್ಳುತ್ತಿವೆ ಎನ್ನಲಾಗಿದೆ.
ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಹತ್ಯೆ ಪ್ರಕರಣಗಳು ಸ್ಥಳೀಯರಲ್ಲಿ ಹಾಗೂ ವಲಸಿಗರಲ್ಲಿ ಆತಂಕ ಸೃಷ್ಟಿಸಿವೆ. ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಕಾಶ್ಮೀರದಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಒಟ್ಟಾರೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ತಿಂಗಳು ಉಗ್ರರ ದಾಳಿಗೆ 11 ಮಂದಿ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.