ನವದೆಹಲಿ: 2019ರ ಆಗಸ್ಟ್ ತಿಂಗಳಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯು ಸುಧಾರಿಸಿದ್ದು, ಭಯೋತ್ಪಾದನಾ ಚಟುವಟಿಕೆಗಳುಗಮನಾರ್ಹವಾಗಿ ಇಳಿಕೆಯಾಗಿವೆ. ಅಷ್ಟೇ ಅಲ್ಲ ಗಡಿಯಾಚೆಗಿನ ಭಯೋತ್ಪಾದಕರ ಒಳನುಸುಳುವಿಕೆಯು ಕೂಡಾ ಕಡಿಮೆಯಾಗಿದೆ ಎಂದು ಬುಧವಾರ ರಾಜ್ಯಸಭೆಗೆ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
‘ಜಮ್ಮು–ಕಾಶ್ಮೀರದಲ್ಲಿ 2018ರಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಸಂಖ್ಯೆಯು 417 ಇತ್ತು. 2021ರಲ್ಲಿ (ನ.30ರವರೆಗೆ) ಅದು 203ಕ್ಕೆ ಇಳಿದಿದೆ. ಗಡಿಭಾಗದಲ್ಲಿ ಒಳನುಸುಳುತ್ತಿದ್ದ ಸಂಖ್ಯೆಯು 2018ರಲ್ಲಿ 143 ಇತ್ತು. ಅದೀಗ 28ಕ್ಕೆ ಇಳಿದಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಕೇಂದ್ರ ಸರ್ಕಾರವು ಭಯೋತ್ಪಾದಕರ ವಿರುದ್ಧ ಪೂರ್ವಭಾವಿ ಕಾರ್ಯಾಚರಣೆಗಳ ಜೊತೆಗೆ ದೃಢವಾದ ಭದ್ರತೆ ಮತ್ತು ಗುಪ್ತಚರ ಗ್ರಿಡ್ ಅನ್ನು ಸ್ಥಾಪಿಸಿದೆ. ಆದ್ದರಿಂದ, ಆಗಸ್ಟ್ 2019ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯು ಗಮನಾರ್ಹವಾಗಿ ಸುಧಾರಿಸಿದೆ’ ಎಂದು ರೈ ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
₹ 31 ಸಾವಿರ ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವ
‘ಕೇಂದ್ರದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ₹ 31 ಸಾವಿರ ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ₹ 28,400 ಕೋಟಿ ಮೌಲ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರವು ಅಧಿಸೂಚನೆ ನೀಡಿದ್ದು, ಇದರಿಂದಾಗಿ 4.5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸುವ ಸಾಧ್ಯತೆಯಿದೆ’ ಎಂದು ರಾಜ್ಯಸಭೆಗೆ ಬುಧವಾರ ತಿಳಿಸಲಾಗಿದೆ.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ 4,500 ಯೂತ್ ಕ್ಲಬ್ಗಳ ಸುಮಾರು 50 ಸಾವಿರ ಸದಸ್ಯರೊಂದಿಗೆ ಸಂವಾದ ನಡೆಸುವುದರ ಜೊತೆಗೆ ಹಲವಾರು ನಿಯೋಗಗಳು, ಹುತಾತ್ಮರ ಕುಟುಂಬಗಳು, ನಾಗರಿಕ ಸಮಾಜ, ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರು ಮತ್ತು ಸಾರ್ವಜನಿಕರೊಂದಿಗೆ ಮಾತನಾಡಿದ್ದಾರೆ’ ಎಂದುಗೃಹ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಗೆ ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಕೈಗಾರಿಕಾ ಅಭಿವೃದ್ಧಿಗಾಗಿ ₹ 28,400 ಕೋಟಿ ರೂಪಾಯಿಗಳ ಹೊಸ ಕೇಂದ್ರ ವಲಯದ ಯೋಜನೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅಲ್ಲಿನ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವ ಜೊತೆಗೆ 4.5ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ. 2020ರ ಸೆ. 25ರಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ₹ 1,352.99 ಕೋಟಿಯ ವ್ಯಾಪಾರ ಪುನರುಜ್ಜೀವನ ಪ್ಯಾಕೇಜ್ ಅನ್ನು ಅನುಮೋದಿಸಿದೆ ಎಂದೂ ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.