ಮುಂಬೈ: ಸೆಮಿಕಂಡಕ್ಟರ್ ಉತ್ಪಾದನೆಯ ಮೂಲಕ ಅಸ್ಸಾಂ ರಾಜ್ಯವು ವಿಶ್ವ ಭೂಪಟದಲ್ಲಿ ರಾರಾಜಿಸಲಿದೆ ಎಂದು ಕೈಗಾರಿಕೋದ್ಯಮಿ ರತನ್ ಟಾಟಾ ಹೇಳಿದ್ದಾರೆ.
ಬಹುನಿರೀಕ್ಷಿತ ಅಸ್ಸಾಂನ ಜಗಿರೋಡ್ನ ಸೆಮಿಕಂಡಕ್ಟರ್ ಘಟಕಕ್ಕೆ ಟಾಟಾ ಸಂಸ್ಥೆಯು ₹27,000 ಕೋಟಿ ಹೂಡಿಕೆ ಮಾಡುತ್ತಿದೆ.
‘ಈಗ ಮಾಡಲಾಗುತ್ತಿರುವ ಹೂಡಿಕೆಯು ಅಸ್ಸಾಂ ರಾಜ್ಯದಲ್ಲಿ ಸಂಕೀರ್ಣ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬದಲಾವಣೆ ತರಲಿದೆ. ಅಸ್ಸಾಂ ರಾಜ್ಯದ ಒಡಂಬಡಿಕೆಯಲ್ಲಿ ಟಾಟಾ ಸಮೂಹದ ಹೂಡಿಕೆಯು ಅತ್ಯಾಧುನಿಕ ಸೆಮಿಕಂಡಕ್ಟರ್ಗಳ ಉತ್ಪಾದನೆಯಲ್ಲಿ ಅಸ್ಸಾಂ ರಾಜ್ಯವನ್ನು ಪ್ರಮುಖ ಸ್ಥಾನದಲ್ಲಿ ನಿಲ್ಲಿಸಲಿದೆ’ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರತನ್ ಟಾಟಾ, ತಾವು, ಅಸ್ಸಾಂ ಸಿಎಂ ಹಿಮಂತ ಶರ್ಮಾ ಮತ್ತು ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್ ಇರುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಅಸ್ಸಾಂ ಸರ್ಕಾರದ ಒಡಂಬಡಿಕೆಯಲ್ಲಿ ಟಾಟಾ ಸಮೂಹವು ಅಸ್ಸಾಂನಲ್ಲಿ ಈಗಾಗಲೇ ಹಲವು ಆಸ್ಪತ್ರೆಗಳನ್ನು ನಿರ್ಮಿಸಿದೆ.
‘ಈ ಹೊಸ ಬೆಳವಣಿಗೆಯ ಮೂಲಕ ಅಸ್ಸಾಂ ರಾಜ್ಯವು ವಿಶ್ವ ಭೂಪಟದಲ್ಲಿರಾರಾಜಿಸಲಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರ ಬೆಂಬಲ ಮತ್ತು ದೂರದೃಷ್ಟಿ ಇವನ್ನೆಲ್ಲ ಸಾಧ್ಯವಾಗಿಸಿದೆ. ಅವರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ’ ಎಂದೂ ಟಾಟಾ ಹೇಳಿದ್ದಾರೆ.
ಈ ಕುರಿತಂತೆ ಮಂಗಳವಾರ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ವರ್ಷಾಂತ್ಯಕ್ಕೆ ಮೊದಲ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಯಾಗಲಿದೆ ಎಂದು ಹೇಳಿದ್ದರು. 1962ರಲ್ಲಿ ದೇಶದಲ್ಲಿ ಚಿಪ್ ಉತ್ಪಾದನೆಯ ಮೊದಲ ಪ್ರಯತ್ನ ಮಾಡಲಾಗಿತ್ತು. ಸೂಕ್ತ ನೀತಿ ಮತ್ತು ಗಟ್ಟಿ ನಂಬಿಕೆ ಇಲ್ಲದ ಹೊರತು ಅದು ಸಾಧ್ಯವಿಲ್ಲ. ಈ ಬಗ್ಗೆ ಪ್ರಧಾನಿ ಮೋದಿಗೆ ಗಟ್ಟಿ ನಂಬಿಕೆ ಇದೆ. ವಿಕಸಿತ ಭಾರತದ ಯಶಸ್ಸಿಗಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳ ಅಗತ್ಯವಿದೆ ಎಂದು ಅವರು ನಂಬಿದ್ದಾರೆ. ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಖಚಿತಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಳಷ್ಟು ಗಮನ ಹರಿಸಿದ್ದಾರೆ’ ಎಂದು ಸಚಿವರು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.