ಮುಂಬೈ: ಕೊರೊನಾ ಸೋಂಕು ತಡೆಯಲು ಹೋರಾಡುತ್ತಿರುವ ಆರೋಗ್ಯ ಯೋಧರಿಗೆ ಗೌರವ ಸಲ್ಲಿಸಲು ಚಪ್ಪಾಳೆ ತಟ್ಟುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರಿಂದಲೇ ಲಾಕ್ಡೌನ್ನ ಗಂಭೀರತೆಯನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಶಿವಸೇನಾ ಟೀಕಿಸಿದೆ.
ಮಂಗಳವಾರ 'ಸಾಮ್ನಾ'ದಲ್ಲಿ ಮೋದಿ ವಿರುದ್ಧ ಗುಡುಗಿದ ಶಿವಸೇನಾ, ಕೊರೊನಾ ಸೋಂಕು ಬಗ್ಗೆ ಜನರು ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದೆ.
ಸೋಂಕಿನ ಬಗ್ಗೆ ಜನರಲ್ಲಿ ಭೀತಿ ಶುರುವಾಗುತ್ತಿರುವ ಹೊತ್ತಿನಲ್ಲಿಯೇ ಮೋದಿಯವರು ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡಯಿರಿ, ತಟ್ಟೆಗೆ ಬಡಿದು ಸದ್ದು ಮಾಡಿ ಎಂದು ಹೇಳಿದ್ದರು. ಮೋದಿಯವರ ಆಹ್ವಾನಕ್ಕೆ ಪ್ರತಿಕ್ರಿಯಿಸಿದ ಜನರು ಗುಂಪು ಗುಂಪಾಗಿ ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ಕುಣಿದರು. ಅದೊಂದು ಹಬ್ಬದ ವಾತಾವರಣವನ್ನು ಸೃಷ್ಚಿಸಿತ್ತು.
ಕೊರೊನಾ ಹರಡುವ ಹೊತ್ತಿನಲ್ಲಿ ಆ ರೀತಿ ಯಾರು ಮಾಡುತ್ತಾರೆ?. ಪಕ್ಷದ ಇಡೀ ಕಾರ್ಯಕರ್ತರು ಬೀದಿಗಿಳಿದು ಘೋಷಣೆ ಕೂಗಿದರು.ಇದು ತಡೆಯಾಜ್ಞೆಯ ಉಲ್ಲಂಘನೆ. ರಾಜ್ಯ ಸರ್ಕಾರ ಲಾಕ್ಡೌನ್ಗೆ ಆದೇಶ ನೀಡಿದಾಗ ಅದನ್ನು ಪಾಲಿಸುವುದು ಜನರ ಕರ್ತವ್ಯ ಎಂದು ಶಿವಸೇನಾ ಹೇಳಿದೆ.
ಲಾಕ್ಡೌನ್ನ್ನು ಗಂಭೀರವಾಗಿ ಪರಿಗಣಿಸಿ, ಮನೆಯಲ್ಲೇ ಇರಿ ಎಂದು ಪ್ರಧಾನಿ ಈಗ ಹೇಳುತ್ತಿದ್ದಾರೆ. ಆದರೆ ಭಾನುವಾರ ಸಂಜೆ ಚಪ್ಪಾಳೆ ತಟ್ಟಿ, ಸಂಗೀತ ನುಡಿಸಿ ಮೆರೆದ ನಂತರಜನರಿಗೆ ಕೊರೊನಾ ವೈರಸ್ನ ಭಯ ಇಲ್ಲದಂತಾಗಿದೆ.
ಜನರು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಪ್ರಧಾನಿ ಅಥವಾ ಮುಖ್ಯಮಂತ್ರಿ ಕ್ರಮ ಕೈಗೊಂಡು ಏನು ಪ್ರಯೋಜನ ಎಂದು ಶಿವಸೇನಾ ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.