ಮುಂಬೈ: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡು 10 ದಿನಗಳು ಕಳೆದರೂ ಕೂಡ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಗ್ಗಂಟು ಮುಗಿಯುತ್ತಿಲ್ಲ. ಈ ಬೆನ್ನಲ್ಲೇ ಶಿವಸೇನೆ ನಾಯಕ ಆರ್ಎಸ್ಎಸ್ಗೆ ಪತ್ರ ಬರೆದು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಹೇಳಿದ್ದಾರೆ.
ಕೇಂದ್ರ ಸಚಿವ ನಿತಿನ ಗಡ್ಕರಿ ಆವರ ಆಪ್ತ ಎಂದು ಗುರುತಿಸಿಕೊಂಡಿರುವ ಶಿವಸೇನೆ ನಾಯಕ ಕಿಶೋರ್ ತಿವಾರಿ, ಸರ್ಕಾರ ರಚನೆ ವಿಚಾರದಲ್ಲಿ ಬಿಜೆಪಿಯು ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ. ಹೀಗಾಗಿ ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಲೋಕಸಭಾ ಚುನಾವಣೆಗೂ ಮುಂದಿನಿಂದಲೇ ಬಿಜೆಪಿಯು ವಿಧಾನಸಭೆ ಚುನಾವಣೆ ಪ್ರಕಟಗೊಂಡ ಬಳಿಕ ಸಮಾನ ಆಧಿಕಾರ ಹಂಚಿಕೆ ಮಾಡಿಕೊಳ್ಳುವುದಕ್ಕೆ ಒಪ್ಪಿಕೊಂಡಿತ್ತು. ಅದರಂತೆ ಮುಖ್ಯಮಂತ್ರಿ ಹುದ್ದೆಯನ್ನು ಸರದಿಯಾಗಿ ಮತ್ತು ಸಚಿವ ಸ್ಥಾನಗಳನ್ನು ಸಮಾನವಾಗಿ ಹಂಚಿಕೊಳ್ಳುವುದಾಗಿ ಮಾತುಕತೆಯಾಗಿತ್ತು ಎಂದಿದ್ದಾರೆ.
ರಾಜ್ಯದ ಜನರು ಬಿಜೆಪಿ ಮತ್ತು ಸೇನೆಯ ಮೈತ್ರಿ ಪರವಾಗಿ ತೀರ್ಪು ನೀಡಿದ್ದಾರೆ. ಆದರೆ ಬಿಜೆಪಿಯು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಗೆ ವಿಳಂಬ ನೀತಿ ಅನುಸರಿಸುವ ಮೂಲಕ ಮೈತ್ರಿ ಧರ್ಮವನ್ನು ಪಾಲಿಸುವಲ್ಲಿ ಸೋತಿದೆ. ಹೀಗಾಗಿ ಆರ್ಎಸ್ಎಸ್ ಕೂಡಲೇ ಮಧ್ಯೆ ಪ್ರವೇಶಿಸಬೇಕು ಮತ್ತು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೇಳಿದ್ದಾರೆ.
ಇನ್ನು ಈ ಪತ್ರಕ್ಕೆ ಆರ್ಎಸ್ಎಸ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಫಲಿತಾಂಶ ಬಂದಾಗಿನಿಂದಲೂ ಸೇನೆ ಮತ್ತು ಬಿಜೆಪಿ ಪಕ್ಷದ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಶಿವಸೇನೆಯು ತನ್ನ ಬೇಡಿಕೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪುತ್ತಿಲ್ಲ. ಇನ್ನು ಬಿಜೆಪಿ ಕೂಡ ಪ್ರಮುಖ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಸೇನೆಯೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದೆ.. ಹೀಗಾಗಿ ಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ, ಬಿಜೆಪಿಯ ಬೇಡಿಕೆಗಳನ್ನು 2014ರಲ್ಲಿ ಸೇನೆ ಒಪ್ಪಿಕೊಂಡಿತ್ತು, ಈಗಲೂ ಕೂಡ ಕಣ್ಣಿಟ್ಟಿದೆ ಎಂದು ಹೇಳಿದೆ.
ಬಿಜೆಪಿಯು ಇದೇ ರೀತಿ ಮುಂದುವರಿದರೆ ಸೇನೆಯು ಶರದ್ ಪವಾರ್ ಅವರ ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಮುಂದಿನ ದಾರಿಯನ್ನು ಕಂಡುಕೊಳ್ಳಲು ಸಿದ್ಧವಿರುವುದಾಗಿಯು ಈಗಾಗಲೇ ಹೇಳಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.