ಮುಂಬೈ: ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ 43ರಲ್ಲಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿ ವಿರುದ್ಧ ಶಿವಸೇನಾ ವ್ಯಂಗ್ಯವಾಡಿದೆ.
ರಾಜ್ಯದಲ್ಲಿ ಪರಿಸ್ಥಿತಿ ಕಠೋರವಾಗಿದೆ ಎಂದಿರುವ ಶಿವಸೇನಾ, ಅತಿಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸುವ ಬಿಜೆಪಿ ಮಾತಿಗೆ ಅಚ್ಚರಿ ವ್ಯಕ್ತಪಡಿಸಿದೆ. ರಾಜ್ಯ ಹಲವು ಸಮಸ್ಯೆಗಳಲ್ಲಿ ಸಿಲುಕಿದ್ದು, ಉದ್ಧವ್ ಠಾಕ್ರೆ ಜೊತೆಗಿನ ಮೈತ್ರಿ ಮಾತುಕತೆ ಇನ್ನೂ ಡೋಲಾಯಮಾನ ಆಗಿರುವಾಗ ಬಿಜೆಪಿ ಈ ನಿಲುವು ತಾಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಮಹಾರಾಷ್ಟ್ರ ಬಿಜೆಪಿ ಘಟಕದ ಮುಖ್ಯಸ್ಥ ರಾವ್ಸಾಹೇಬ್ ಧನ್ವೆ ಅವರು 2014ರ ಚುನಾವಣೆಗಿಂತ ಈ ಬಾರಿ ಹೆಚ್ಚುವರಿಯಾಗಿ ಒಂದು ಸ್ಥಾನ ಗೆಲ್ಲುವುದಾಗಿ ಶನಿವಾರ ಹೇಳಿಕೆ ನೀಡಿದ್ದರು. ಉತ್ತರ ಪ್ರದೇಶ (80 ಸ್ಥಾನ) ಹೊರತುಪಡಿಸಿದರೆ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ.
ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಎನ್ಡಿಎ ಜೊತೆ ಗುರುತಿಸಿಕೊಂಡಿರುವ ಶಿವಸೇನಾ, ಮುಂಬರುವ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಈ ಮೊದಲು ಹೇಳಿಕೆ ನೀಡಿತ್ತು.ಹೀಗಿದ್ದರೂ ಶಿವಸೇನೆ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಬಿಜೆಪಿ ಆಗಾಗ್ಗೆ ಒಲವು ವ್ಯಕ್ತಪಡಿಸುತ್ತಾ ಬಂದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.