ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ಠಾಕ್ರೆ ಕುಟುಂಬಕ್ಕೆ ಇ.ಡಿ ನೋಟಿಸ್ ಬೆದರಿಕೆ ಹಾಕಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಶಿವ ಸೇನಾ ಸಂಸದ ಸಂಜಯ್ ರಾವುತ್ ಶನಿವಾರ ತಿರುಗೇಟು ನೀಡಿದ್ದಾರೆ.
‘ನೀವು ಕೇಂದ್ರದ ಸಚಿವ ಇರಬಹುದು. ಆದರೆ, ಇದು ಮಹಾರಾಷ್ಟ್ರ. ಇದನ್ನು ಮರೆಯಬೇಡಿ. ನಾವು ನಿಮ್ಮ ಬಾಪ್ (ಅಪ್ಪ), ಇದರ ಅರ್ಥವೇನೆಂದು ನಿಮಗೆ ಚೆನ್ನಾಗಿ ಗೊತ್ತಿರಬಹುದು’ ಎಂದು ರಾವತ್ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸಚಿವರು ಬೆದರಿಕೆ ಒಡ್ಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂಬೈನಲ್ಲಿನ ‘ಸುಲಿಗೆ ವ್ಯವಸ್ಥೆ’ಯನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ರಾವತ್, ರಾಣೆಗೆ ಸೂಕ್ಷ್ಮ ಎಚ್ಚರಿಕೆ ನೀಡಿದರು. ‘ರಾಣೆ ನಮ್ಮ ಜಾತಕ ಅವರ ಬಳಿ ಇದೆ ಎಂದು ಬೆದರಿಕೆಯೊಡ್ಡುತ್ತಿರಬಹುದು. ನಮ್ಮ ಬಳಿಯೂ ಅವರ ಜಾತಕವಿದೆ’ ಎಂದು ರಾವತ್ ತಿರುಗೇಟು ನೀಡಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಾಂದ್ರಾ ಉಪನಗರದಲ್ಲಿರುವ ಖಾಸಗಿ ನಿವಾಸ ‘ಮಾತೋಶ್ರೀ’ಯಲ್ಲಿರುವ ನಾಲ್ವರಿಗೆ ಇ.ಡಿ ನೋಟಿಸ್ ಜಾರಿ ಮಾಡಲು ಸಿದ್ಧತೆ ಮಾಡಿಕೊಂಡಿರುವುದು ಗೊತ್ತಿದೆ ಎಂದು ರಾಣೆ ಹೇಳಿಕೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.