ADVERTISEMENT

ಉತ್ತರಾಖಂಡ: 11 ಚಾರಣಿಗರ ತಂಡದ 7 ಮಂದಿ ಸಾವು

ಪಿಟಿಐ
Published 23 ಅಕ್ಟೋಬರ್ 2021, 3:55 IST
Last Updated 23 ಅಕ್ಟೋಬರ್ 2021, 3:55 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಉತ್ತರಕಾಶಿ: ಉತ್ತರಾಖಂಡದಲ್ಲಿ ನಾಪತ್ತೆಯಾಗಿದ್ದ 11 ಮಂದಿಯ ಚಾರಣಿಗರ ತಂಡದ ಇನ್ನಿಬ್ಬರು ಮೃತರಾಗಿದ್ದು, ಸಾವಿನ ಸಂಖ್ಯೆ ಏಳಕ್ಕೆ ತಲುಪಿದೆ, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತಂಡದ ಇಬ್ಬರು ಸದಸ್ಯರನ್ನು ಗುರುವಾರ ರಕ್ಷಿಸಲಾಗಿತ್ತು. ಗಾಯಗೊಂಡಿರುವ ಅವರು, ಹರ್ಸಿಲ್ ಮತ್ತು ಉತ್ತರಕಾಶಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರಕಾಶಿಯ ಹರ್ಸಿಲ್ ಮೂಲಕ ಹಿಮಾಚಲ ಪ್ರದೇಶದ ಚಿತ್ಕುಲ್‌ಗೆ ಚಾರಣಕ್ಕೆ ತೆರಳಿದ್ದ ಅವರು ನಾಪತ್ತೆಯಾಗಿದ್ದರು.

ADVERTISEMENT

ಉತ್ತರಕಾಶಿಯಲ್ಲಿ ರಕ್ಷಣಾ ತಂಡಗಳು ಗುರುವಾರ ಐದು ಚಾರಣಿಗರ ಶವಗಳನ್ನು ಪತ್ತೆ ಹಚ್ಚಿದ್ದವು. ತಂಡದ ಇಬ್ಬರು ಸದಸ್ಯರು ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ ಎಂದು ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಇಬ್ಬರು ಚಾರಣಿಗರಿಗಾಗಿ ಹೆಲಿಕಾಪ್ಟರ್ ನೆರವಿನಿಂದ ಯುದ್ಧೋಪಾದಿಯಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಬಿಹಾರ 9 ರೆಜಿಮೆಂಟ್‌ನ ಕರ್ನಲ್ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ದೆಹಲಿಯ ಅನಿತಾ ರಾವತ್ (38), ಪಶ್ಚಿಮ ಬಂಗಾಳದ ಮಿಥುನ್ ದಾರಿ (31), ತನ್ಮಯ್ ತಿವಾರಿ (30), ವಿಕಾಶ್ ಮಕಲ್ (33), ಸೌರವ್ ಘೋಷ್ (34), ಸವಿಯನ್ ದಾಸ್ (28), ರಿಚರ್ಡ್ ಮಂಡಲ್ ( 30) ಮತ್ತು ಸುಕೇನ್ ಮಾಂಝಿ (43) ಚಾರಣಕ್ಕೆ ತೆರಳಿದ್ದರು. ಅಡುಗೆ ಸಿಬ್ಬಂದಿಯನ್ನು ಉತ್ತರಕಾಶಿಯ ಪುರೋಲಾದ ದೇವೇಂದ್ರ (37), ಜ್ಞಾನ ಚಂದ್ರ (33) ಮತ್ತು ಉಪೇಂದ್ರ (32) ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.