ADVERTISEMENT

‘ಚಳಿ ಜಾಸ್ತಿಯಾಗ್ತಿದೆ ಅಂತಾ ಕುಡಿದರೆ ಕುಸಿಯುತ್ತೆ ದೇಹದ ಉಷ್ಣತೆ’: ಐಎಂಡಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 16:54 IST
Last Updated 26 ಡಿಸೆಂಬರ್ 2020, 16:54 IST
   

ನವದೆಹಲಿ: ಹಿಮಾಲಯದಿಂದ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಉತ್ತರ ಭಾರತದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಸಂದರ್ಭ ಮನೆಯಲ್ಲಿ ಅಥವಾ ವರ್ಷಾಂತ್ಯದ ಪಾರ್ಟಿಗಳಲ್ಲಿ ಕುಡಿತದ ಮೊರೆಹೋಗುವುದು ಒಳ್ಳೆಯದಲ್ಲ ಎಂದು ಭಾರತದ ಹವಾಮಾನ ಇಲಾಖೆ ಸಲಹೆ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಡಿಸೆಂಬರ್ 28 ರಿಂದ ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನಗಳಲ್ಲಿ ತೀವ್ರ ಶೀತಗಾಳಿ ನಿರೀಕ್ಷಿಸಲಾಗಿದ್ದು, ಫ್ಲೂ, ನೆಗಡಿ, ಮೂಗಿನಲ್ಲಿ ರಕ್ತಸ್ರಾವದಂತಹ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ದೀರ್ಘಕಾಲದಿಂದ ದೇಹ ಶೀತ ಅನುಭವಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ಈ ಸಂದರ್ಭ ಮದ್ಯ ಸೇವನೆ ಮಾಡಬೇಡಿ. ಮದ್ಯವು ದೇಹದ ಉಷ್ಣಾಂಶವನ್ನು ಕುಗ್ಗಿಸುತ್ತದೆ ಎಂದು ಐಎಂಡಿ ಸಲಹೆ ನೀಡಿದೆ.

"ಆದಷ್ಟು ಹೊತ್ತು ಮನೆಯಲ್ಲೇ ಇರಿ. ವಿಟಮಿನ್ ಸಿ ಇರುವ ಹಣ್ಣುಗಳನ್ನು ತಿನ್ನಿ ಮತ್ತು ಮೈಕೊರೆವ ಚಳಿಯ ಪರಿಣಾಮವನ್ನು ಎದುರಿಸಲು ನಿಮ್ಮ ಚರ್ಮಕ್ಕೆ ನಿಯಮಿತವಾಗಿ ಮಾಯಿಶ್ಚರೈಸ್ ಮಾಡುತ್ತಿರಿ," ಎಂದು ಹೇಳಿದೆ.

ಹಿಮಾಲಯದ ಪಶ್ಚಿಮ ಭಾಗದ ಶೀತ ಗಾಳಿಯಿಂದಾಗಿ ಭಾನುವಾರ ಮತ್ತು ಸೋಮವಾರ ಉಷ್ಣಾಂಶ ಮತ್ತಷ್ಟು ಕುಸಿಯಲಿದೆ ಎಂದು ಐಎಂಡಿಯ ಪ್ರಾದೇಶಿಕ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರ, ಲಡಾಕ್, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹಿಮಪಾತ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.