ನವದೆಹಲಿ: ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಯಲ್ಲಿ ವಿರೋಧಾಭಾಸಗಳಿದ್ದು, ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಿಂದ ತಮ್ಮನ್ನು ದೋಷಮುಕ್ತಗೊಳಿಸುವಂತೆ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಬ್ರಿಜ್ ಭೂಷಣ್ ಪರ ವಾದ ಮಂಡಿಸಿದ ರಾಜೀವ್ ಮೋಹನ್, ಪ್ರಕರಣವನ್ನು ಪರಿಶೀಲಿಸಲು ರಚಿಸಲಾದ ಮೇಲ್ವಿಚಾರಣಾ ಸಮಿತಿಯು ಏಳು ದಿನಗಳಲ್ಲಿ ಎಫ್ಐಆರ್ ದಾಖಲಿಸುವಂತೆ ಶಿಫಾರಸು ಮಾಡಬೇಕಿತ್ತು. ಆದರೆ ಅಂತಹ ಯಾವುದೇ ಶಿಫಾರಸನ್ನು ಮಾಡಿಲ್ಲ. ಆರೋಪಗಳನ್ನು ದೃಢೀಕರಿಸುವ ಪ್ರಾಥಮಿಕ ಸಾಕ್ಷಿಗಳನ್ನು ಅದು ಪಡೆದಿಲ್ಲ’ ಎಂದು ನ್ಯಾಯಾಲಕ್ಕೆ ತಿಳಿಸಿದರು.
‘ಮೇಲ್ವಿಚಾರಣಾ ಸಮಿತಿಯಿಂದ ಯಾವುದೇ ಪ್ರಾಥಮಿಕ ಸಾಕ್ಷಿ ಪತ್ತೆಯಾಗದ ಕಾರಣ, ಯಾವುದೇ ಎಫ್ಐಆರ್ ದಾಖಲಾಗದ ಕಾರಣ ಆರೋಪಿಯು ದೋಷಮುಕ್ತನಾಗುತ್ತಾನೆ’ ಎಂದು ತಿಳಿಸಿದರು.
‘ಮೇಲ್ವಿಚಾರಣಾ ಸಮಿತಿಯ ಮುಂದೆ ನೀಡಿದ ಹೇಳಿಕೆಗಳಿಗೂ, ಸೆಕ್ಷನ್ 164 ಸಿಆರ್ಪಿಸಿ ಅಡಿಯಲ್ಲಿ ದಾಖಲಾದ ಹೇಳಿಕೆಗಳಲ್ಲಿ ವ್ಯತ್ಯಾಸವಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಬ್ರಿಜ್ ಭೂಷಣ್ ಸಿಂಗ್ ಅವರಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ನಡೆಸಲು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.