ಲಖನೌ: ಇಲ್ಲಿನ ಶಾಮ್ಲಿ ಜಿಲ್ಲೆಯ ಕೈರಾನಾದಿಂದ ವಲಸೆ ಹೋಗಿದ್ದ ಹಿಂದೂಗಳ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಚುನಾವಣೆ ಸಂದರ್ಭದಲ್ಲಿ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಶನಿವಾರ ಇಲ್ಲಿ ಬಿಜೆಪಿ ಕಾರ್ಯಕರ್ತರ ಜತೆ ಮನೆ–ಮನೆ ಭೇಟಿ ನಡೆಸಿದ ಶಾಅವರು, ಯಾರೂ ಹೆದರಬೇಕಿಲ್ಲ ಎಂದು ಅಭಯ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಆಡಳಿತದ ಅವಧಿಯಲ್ಲಿ ಕೈರಾನಾದಿಂದ ವಲಸೆ ಹೋಗಿದ್ದ ಕುಟುಂಬಗಳು, ಬಿಜೆಪಿ ಆಡಳಿತದಲ್ಲಿ ವಾಪಸ್ ಆಗಿವೆ. ಅಂತಹ ಕುಟುಂಬಗಳನ್ನು, ವ್ಯಾಪಾರಿಗಳನ್ನು ಅಮಿತ್ ಶಾ ಶನಿವಾರ ಭೇಟಿ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ‘ನೀವು ಈಗ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಈಗ ನಿಮ್ಮನ್ನು ಕಾಪಾಡುವ ಸರ್ಕಾರವಿದೆ’ ಎಂದು ಎಲ್ಲರಿಗೂ ಅಮಿತ್ ಶಾ ಅಭಯ ನೀಡಿದ್ದಾರೆ.
ಎಸ್ಪಿ ಮತ್ತು ಬಿಎಸ್ಪಿ ರಾಜ್ಯವನ್ನು ಕಗ್ಗತ್ತಲಿಗೆ ದೂಡಿದ್ದವು. ಅಪರಾಧಿಗಳೇ ತುಂಬಿದ್ದ ಈ ಪಕ್ಷದ ನೇತೃತ್ವದ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅಲ್ಲದೆ ಅವರು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದರು.ಬಿಜೆಪಿ ಸರ್ಕಾರವು ರಾಮಮಂದಿರ ನಿರ್ಮಿಸುತ್ತಿದೆ. ಕಾಶಿಯನ್ನು ಅಭಿವೃದ್ಧಿಪಡಿಸಿದೆ. ಆದರೆ ಹಿಂದಿನ ಸರ್ಕಾರಗಳು ಇವೆಲ್ಲವನ್ನು ಕಡೆಗಣಿಸಿದ್ದವು ಎಂದು ಶಾ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.