ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ಇಂದು ಹಮ್ಮಿಕೊಂಡಿದ್ದ ಗೃಹ ಸಚಿವ ಅಮಿತ್ ನಿವಾಸದತ್ತ ಜಾಥಾ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಸಚಿವರ ಭೇಟಿಗೆ ಅವಕಾಶ ಸಿಕ್ಕ ನಂತರ ಜಾಥಾ ನಡೆಸುವುದಾಗಿ ತಿಳಿಸಿರುವ ಹೋರಾಟಗಾರರು ಸದ್ಯ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.
‘ಶಾಹೀನ್ ಬಾಗ್ ಪ್ರತಿಭಟನಾಕಾರರು ಗೃಹ ಸಚಿವ ಅಮಿತ್ ಶಾ ಅವರ ಭೇಟಿಗಾಗಿ ಜಾಥಾ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಆದರೆ, ಅವರ ಸಂದರ್ಶನಕ್ಕೆ ಸಮಯ ನಿಗದಿಯಾಗದೇ ಜಾಥಾ ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಅವರೊಂದಿಗೆ ಸದ್ಯ ಮಾತುಕತೆ ಮುಂದುವರಿಸಿದ್ದೇವೆ. ಅವರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ,’ ಎಂದು ಆಗ್ನೇಯ ದೆಹಲಿಯ ಡಿಸಿಪಿ ಆರ್.ಪಿ ಮೀನಾ ತಿಳಿಸಿದ್ದಾರೆ.
ಪ್ರತಿಭಟನಾಕಾರರು ಜಾಥಾ ನಡೆಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಶಾಹೀನ್ ಬಾಗ್ನಿಂದ ಗೃಹ ಸಚಿವರ ನಿವಾಸದ ವರೆಗೆ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.
ಜಾಥಾವನ್ನು ವೃದ್ಧ ಮಹಿಳೆಯರು ಮುನ್ನಡೆಸುತ್ತಿದ್ದು ಅವರನ್ನು ಶಾಹೀನ್ ಬಾಗ್ನ ದಾದಿಗಳು ಎಂದು ಕರೆಯಲಾಗುತ್ತಿದೆ. ಸದ್ಯ ಅವರೇ ಪೊಲೀಸರೊಂದಿಗೆ ಮಾತುಕತೆಯಲ್ಲಿ ತೊಡಗಿದ್ಧಾರೆ. ಮಾತುಕತೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸರು. ಪ್ರತಿಭಟನೆ ವೇಳೆ ಶಿಷ್ಟಾಚಾರ ಉಲ್ಲಂಘಿಸುವುದಿಲ್ಲ ಮತ್ತು ಗೃಹ ಸಚಿವರ ಭೇಟಿಗೆ ಅವಕಾಶ ಸಿಗುವ ವರೆಗೆ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಹೋರಾಟಗಾರರು ತಿಳಿಸಿದ್ದಾರೆ ಎಂದು ಹೇಳಿದರು.
ಸಿಎಎ ವಿಚಾರವಾಗಿ ಯಾರಿಗೆಲ್ಲ ಚರ್ಚೆ ಮಾಡುವ ಉದ್ದೇಶವಿದೆಯೋ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ಸಿಎಎ ವಿರೋಧಿ ಹೋರಾಟಗಾರರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಇಂದು ಅವರ ನಿವಾಸಕ್ಕೆ ಜಾಥಾ ಹಮ್ಮಿಕೊಂಡಿದ್ದರು. ಆದರೆ, ಇನ್ನು ಮೂರು ದಿನಗಳಲ್ಲಿ ಭೇಟಿ ಅವಕಾಶ ನೀಡುವುದಾಗಿ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.