ಮುಂಬೈ: ಶಕ್ತಿಪೀಠ ಎಕ್ಸ್ಪ್ರೆಸ್ ವೇ ನಿರ್ಮಾಣವನ್ನು ವಿರೋಧಿಸಿ ಮಹಾರಾಷ್ಟ್ರದ 12 ಜಿಲ್ಲೆಗಳ ರೈತರು ಆಗಸ್ಟ್ 15ರಂದು ತಮ್ಮ ಜಮೀನುಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ‘ಎಕ್ಸ್ಪ್ರೆಸ್ ವೇ ನಿರ್ಮಾಣದಿಂದ ತಮ್ಮ ಫಲವತ್ತಾದ ಕೃಷಿ ಜಮೀನು ನಾಶವಾಗಲಿದೆ’ ಎಂದು ರೈತರು ಆರೋಪಿಸಿದ್ದಾರೆ.
‘ಶಕ್ತಿಪೀಠ ಎಕ್ಸ್ಪ್ರೆಸ್ ವೇ ವಿರೋಧಿ ಸಂಘರ್ಷ ಸಮಿತಿ’ಯು ಶನಿವಾರ ಏರ್ಪಡಿಸಿದ್ದ ಆನ್ಲೈನ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ರೈತರು, ಸಾರ್ವಜನಿಕರು ಭಾಗವಹಿಸಿದ್ದರು. ಎಕ್ಸ್ಪ್ರೆಸ್ ವೇಯನ್ನು ವಿರೋಧಿಸಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಆ.15ರಂದು ನಿರ್ಣಯ ಅಂಗೀಕರಿಸಬೇಕು ಮತ್ತು ಸಹಿ ಸಂಗ್ರಹ ಅಭಿಯಾನ ಆರಂಭಿಸಬೇಕು ಎಂದೂ ಸಭೆಯಲ್ಲಿ ನಿರ್ಣಯಿಸಲಾಯಿತು.
‘ನಮ್ಮ ಜಮೀನುಗಳಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ, ಶಕ್ತಿಪೀಠಕ್ಕೆ ನಮ್ಮ ಜಮೀನಿನಲ್ಲಿ ಜಾಗವಿಲ್ಲ’ ಎನ್ನುವ ಘೋಷವಾಕ್ಯದಡಿ ಪ್ರತಿಭಟನೆ ನಡೆಯಲಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲಾಗುವುದು’ ಎಂದು ಕಾಂಗ್ರೆಸ್ನ ಎಂಎಲ್ಸಿ ಸತೇಜ್ ಪಾಟಿಲ್ ಹೇಳಿದರು.
ನಾಗ್ಪುರ ಮತ್ತು ಗೋವಾಗೆ ತಲುಪಲು ಸದ್ಯ 18 ತಾಸು ಬೇಕು. ಈ ಅವಧಿಯನ್ನು 8 ಗಂಟೆಗೆ ಕಡಿತಗೊಳಿಸುವ ಸಲುವಾಗಿ 802 ಕಿ.ಮೀ ಉದ್ದದ ಈ ಎಕ್ಸ್ಪ್ರೆಸ್ ವೇ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ನಿರ್ಮಾಣ ಕಾರ್ಯಕ್ಕೆ ₹20,787 ಕೋಟಿ ನೀಡುವುದಕ್ಕೆ ಜೂನ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.