ಕೋಲ್ಕತ್ತ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಭಯದಿಂದ ಪಶ್ಚಿಮ ಬಂಗಾಳದಲ್ಲಿ ಆರು ಮಂದಿ ಮೃತಪಟ್ಟಿದ್ದು, ಬಿಜೆಪಿ ಈ ಬಗ್ಗೆ ಭಯ ಸೃಷ್ಟಿಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.
ಇಂಡಿಯನ್ ನ್ಯಾಷನಲ್ ತೃಣಮೂಲ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTTUC) ಸಮಾವೇಶದಲ್ಲಿ ಮಾತನಾಡಿದ ಅವರು, 'ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಈ ಬಗ್ಗೆ ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಆರು ಮಂದಿ ಮೃತಪಟ್ಟಿರುವುದಾಗಿ ಹೇಳಲು ಬೇಸರವಾಗುತ್ತಿದೆ. ಸಾವಿಗೆ ಕಾರಣವಾದ ಆತಂಕ ಸೃಷ್ಟಿಸಿರುವ ಬಿಜೆಪಿ ಮುಖಂಡರಿಗೆ ನಾಚಿಕೆ ಆಗಬೇಕು' ಎಂದು ಟೀಕಿಸಿದರು.
ಬಂಗಾಳದಲ್ಲಿ ಎನ್ಆರ್ಸಿಗೆ ಅನುಮತಿ ನೀಡಲಾಗದು ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.
ಬಂಗಾಳದಲ್ಲಾಗಲೀ, ಇತರ ಯಾವುದೇ ಪ್ರದೇಶದಲ್ಲಾಗಲೀ ಎನ್ಆರ್ಸಿಗೆ ಅವಕಾಶ ಇರದು. ಈ ಒಪ್ಪಂದಕ್ಕೆ ಅಸ್ಸಾಂ ಸಮ್ಮತಿಸಿರುವುದರಿಂದ ಅಲ್ಲಿ ಎನ್ಆರ್ಸಿಗೆ ಅವಕಾಶ ನೀಡಲಾಗಿದೆ. ಹಿಂದೂ ಮುಸ್ಲಿಮರನ್ನು ವಿಭಜಿಸಲು ಕೆಲವರು ಎನ್ಆರ್ಸಿ ಕುರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಸ್ಸಾಂನಲ್ಲಿ 13 ಲಕ್ಷ ಹಿಂದೂಗಳನ್ನು ಎನ್ಆರ್ಸಿಯಿಂದ ಕೈಬಿಡಲಾಗಿದೆ. ಮುಸ್ಲಿಮರು, ಅಸ್ಸಾಮಿಯರು,ಹಿಂದಿ ಮಾತನಾಡುವವರನ್ನು ಕೈಬಿಡಲಾಗಿದೆ ಎಂದು ಬ್ಯಾನರ್ಜಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.