ADVERTISEMENT

ಹಸೀನಾಗೆ ಎಲ್ಲಿಯವರೆಗೆ ಬೇಕಾದರೂ ಭಾರತದಲ್ಲಿರಲು ಅವಕಾಶ ನೀಡಬೇಕು:ಮಣಿಶಂಕರ್ ಅಯ್ಯರ್

ಪಿಟಿಐ
Published 12 ಜನವರಿ 2025, 2:52 IST
Last Updated 12 ಜನವರಿ 2025, 2:52 IST
<div class="paragraphs"><p>ಮಣಿಶಂಕರ್ ಅಯ್ಯರ್ ಹಾಗೂ&nbsp;ಶೇಖ್ ಹಸೀನಾ</p></div>

ಮಣಿಶಂಕರ್ ಅಯ್ಯರ್ ಹಾಗೂ ಶೇಖ್ ಹಸೀನಾ

   

–ಪಿಟಿಐ ಚಿತ್ರಗಳು

ಕೋಲ್ಕತ್ತ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಎಲ್ಲಿಯವರೆಗೆ ಬೇಕಾದರೂ ಭಾರತದಲ್ಲಿ ಇರಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕಳೆದ ತಿಂಗಳು ಢಾಕಾಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಉಭಯ ರಾಷ್ಟ್ರಗಳ ನಡುವೆ ಮಾತುಕತೆ ನಿರಂತರವಾಗಿ ನಡೆಯಬೇಕು. ಆದೇ ರೀತಿ ಬಾಂಗ್ಲಾದ ಮಧ್ಯಂತರ ಸರ್ಕಾರದೊಂದಿಗೂ ಉತ್ತಮ ಬಾಂಧವ್ಯವನ್ನು ಮುಂದುವರಿಸುವ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.

ಹಸೀನಾ ಅವರನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಬೇಕೆಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಶೇಖ್ ಹಸೀನಾ ಅವರು ನಮಗೆ ಸಾಕಷ್ಟು ಒಳ್ಳೆಯದನ್ನು ಮಾಡಿದ್ದಾರೆ ಎಂದು ನಾವು ಎಂದಿಗೂ ಒಪ್ಪುವುದಿಲ್ಲ. ಆದರೆ, ಅವರಿಗೆ (ಹಸೀನಾ) ಆಶ್ರಯ ನೀಡಿರುವುದು ನನಗೆ ಖುಷಿ ತಂದಿದೆ. ಅವರಿಗೆ ಎಲ್ಲಿಯವರೆಗೆ ಬೇಕಾದರೂ ಭಾರತದಲ್ಲಿ ಇರಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದ್ದಾರೆ.

‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಾಗುತ್ತಿರುವುದು ನಿಜ. ಆದರೆ, ದಾಳಿಗೆ ಒಳಗಾಗುತ್ತಿರುವವರು ಹೆಚ್ಚಾಗಿ ಹಸೀನಾ ಬೆಂಬಲಿಗರೇ ಆಗಿದ್ದಾರೆ. ಹಿಂದೂಗಳ ಮೇಲಿನ ದಾಳಿಗಳ ಕುರಿತಾದ ವರದಿಗಳು ನಿಜ ಇರಬಹುದು. ಆದರೆ, ಬಹುತೇಕ ವರದಿಗಳು ಉತ್ಪ್ರೇಕ್ಷಿತವಾಗಿವೆ. ಏಕೆಂದರೆ, ಅನೇಕ ಸಂಘರ್ಷಗಳು ರಾಜಕೀಯ ಭಿನ್ನಾಭಿಪ್ರಾಯಗಳ ಇತ್ಯರ್ಥಕ್ಕೆ ಸಂಬಂಧಿಸಿದ್ದಾಗಿರುತ್ತವೆ’ ಎಂದು ಅಯ್ಯರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಬಾಂಗ್ಲಾದೇಶದ ಸರ್ಕಾರ ಪತನಗೊಂಡು, 16 ವರ್ಷಗಳಿಂದ ಪ್ರಧಾನಿಯಾಗಿದ್ದ ಶೇಖ್ ಹಸೀನಾ (77) ಅವರು 2024ರ ಆಗಸ್ಟ್‌ 5ರಂದು ಭಾರತಕ್ಕೆ ಪಲಾಯನಗೈದಿದ್ದರು.

ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ನಂತರ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.