ADVERTISEMENT

ಮೊಹಮ್ಮದ್ ಘೋರಿಯಂತೆ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ: ಶಿವಸೇನಾ

ಏಜೆನ್ಸೀಸ್
Published 19 ನವೆಂಬರ್ 2019, 9:36 IST
Last Updated 19 ನವೆಂಬರ್ 2019, 9:36 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ:ಬಿಜೆಪಿಯು ಮೊಹಮ್ಮದ್ಘೋರಿಯಂತೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದು ಶಿವಸೇನಾ ಕಿಡಿಕಾರಿದೆ.

ಎನ್‌ಡಿಎ ಮೈತ್ರಿಕೂಟದಿಂದ ಶಿವಸೇನಾವನ್ನು ಉಚ್ಚಾಟಿಸಿದ್ದನ್ನು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದ್ದು, ಯಾವ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದೆ. ಜತೆಗೆ ಬಿಜೆಪಿಯು ಎನ್‌ಡಿಎಯ ನಾಯಕತ್ವ ವಹಿಸಿರುವುದನ್ನೂ ಪ್ರಶ್ನಿಸಿದೆ.

ರಾಜಕೀಯ ಕ್ಷೇತ್ರದಲ್ಲಿ ರಾಷ್ಟ್ರೀಯತೆ ಮತ್ತು ಹಿಂದುತ್ವದ ಬಗ್ಗೆ ಮಾತನಾಡಲೂ ಯಾರೂ ಮುಂದಾಗದಂತಹ ಪರಿಸ್ಥಿತಿ ಇದ್ದಾಗ ಜನಸಂಘದ ಜತೆ ನಿಂತು ತಳಮಟ್ಟದಿಂದ ಬೆಳೆಯಲು ಶಿವಸೇನಾ ಸಹಕರಿಸಿತು. ಬಿಜೆಪಿ ಇಂದು ಈ ಸ್ಥಿತಿಯಲ್ಲಿರುವುದರ ಹಿಂದೆ ಶಿವಸೇನಾದ ಪಾತ್ರವೂ ಇದೆ. ಯಾವ ಆಧಾರದಲ್ಲಿ ಶಿವಸೇನಾವನ್ನು ಎನ್‌ಡಿಎಯಿಂದ ಉಚ್ಚಾಟಿಸಲಾಗಿದೆ? ಇದು ಅಹಂಕಾರ ಮತ್ತು ಅನಿಯಂತ್ರಿತ ರಾಜಕಾರಣದ ಪ್ರಾರಂಭ ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ADVERTISEMENT

ಘೋರಿಯಂತೆ ಬೆನ್ನಿಗೆ ಚೂರಿ ಹಾಕಿದ ಬಿಜೆಪಿಗೆ ಮಹಾರಾಷ್ಟ್ರದ ಜನತೆ ಪಾಠ ಕಲಿಸಲಿದ್ದಾರೆ ಎಂದೂ ಶಿವಸೇನಾ ಹೇಳಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಸೆಣಸಿದ್ದ ಬಿಜೆಪಿ–ಶಿವಸೇನಾ ಬಳಿಕ ಅಧಿಕಾರ ಹಂಚಿಕೆ ಬಿಕ್ಕಟ್ಟಿನಿಂದಾಗಿ ಸ್ನೇಹ ಕಡಿದುಕೊಂಡಿವೆ. ನಂತರ ಕಾಂಗ್ರೆಸ್, ಎನ್‌ಸಿಪಿ ಜತೆಗೂಡಿ ಸರ್ಕಾರ ರಚಿಸಲು ಶಿವಸೇನಾ ಒಲವು ತೋರ್ಪಡಿಸಿದ್ದರೂ ಯಶಸ್ವಿಯಾಗಿಲ್ಲ. ಇನ್ನೇನು ಎನ್‌ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಸಿಕ್ಕಿಯೇಬಿಡ್ತು ಎನ್ನುವಾಗ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಯೂಟರ್ನ್ ಮಾಡಿದ್ದಾರೆ. ಸೋಮವಾರ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ್ದ‍ಪವಾರ್,ಬಿಜೆಪಿ–ಶಿವಸೇನಾ ಅವರ ದಾರಿ ನೋಡಿಕೊಳ್ಳಲಿ; ನಮ್ಮ ಹಾದಿ ನಮಗೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.