ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಗುರುವಾರ ಭೇಟಿಯಾಗಿರುವ ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ತಮ್ಮ ಪಕ್ಷದ 12 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿದ್ದಾರೆ.
ಎರಡು ವಾರಗಳ ಹಿಂದೆ ಶಿವಸೇನಾದ(ಉದ್ಧವ್ ಬಣ) 12 ಸಂಸದರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಸೇರ್ಪಡೆಯಾಗಿದ್ದರು.
ಶಿಂದೆ ನೇತೃತ್ವದ 40 ಮಂದಿ ಶಿವಸೇನಾ ಶಾಸಕರು, 10 ಮಂದಿ ಪಕ್ಷೇತರರು ಹಾಗೂ ಇತರ ಶಾಸಕರು ‘ಮಹಾ ವಿಕಾಸ್ ಅಘಾಡಿ’ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದಿದ್ದರು. ನಂತರ ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಶಿವಸೇನಾದ 12 ಸಂಸದರು ಶಿಂದೆ ಬಣಕ್ಕೆ ಸೇರ್ಪಡೆಗೊಂಡಿದ್ದರು. ಶ್ರೀಕಾಂತ್ ಶಿಂದೆ, ರಾಹುಲ್ ಶೆವಾಲೆ, ಭಾವನಾ ಗವಾಲಿ, ಹೇಮಂತ್ ಗೋಡ್ಸೆ, ರಾಜೇಂದ್ರ ಗವಿತ್, ಸದಾಶಿವ್ ಲೋಖಂಡೆ, ಹೇಮಂತ್ ಪಾಟೀಲ್, ಸಂಜಯ್ ಮಾಂಡಲೀಕ್, ಧೈರ್ಯಶೀಲ್ ಮಾನೆ, ಶ್ರೀರಂಗ್ ಬರ್ನೆ, ಕ್ರಪಾಲ್ ತುಮನೆ ಹಾಗೂ ಪ್ರತಾಪ್ ರಾವ್ ಜಾಧವ್ ಅವರು ಏಕನಾಥ ಶಿಂದೆ ಬಣ ಸೇರಿದ ಶಿವಸೇನಾ ಸಂಸದರಾಗಿದ್ದಾರೆ.
ಜೂನ್ 30ರಂದು ಶಿಂದೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.