ADVERTISEMENT

ಶ್ರದ್ಧಾ ಭೀಕರ ಕೊಲೆ: ಮೃತದೇಹ ಕತ್ತರಿಸುವಾಗ ಹಂತಕ ಮಾಡುತ್ತಿದ್ದ ಭಾರಿ ಉಪಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2022, 13:05 IST
Last Updated 16 ನವೆಂಬರ್ 2022, 13:05 IST
ಶ್ರದ್ಧಾ
ಶ್ರದ್ಧಾ   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್‌ ಎಂಬ ಮುಂಬೈ ಮೂಲದ ಯುವತಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕಅಫ್ತಾಬ್ ಪೂನವಾಲಾನ ಕ್ರೈಂ ಮನಸ್ಥಿತಿ ಹೇಗಿತ್ತು ಎಂಬುದು ಬಹಿರಂಗಗೊಳ್ಳುತ್ತಿದೆ.

ಮೇ 10 ರಂದುಶ್ರದ್ಧಾ ವಾಲ್ಕರ್‌ಳನ್ನು ಕತ್ತು ಸೀಳಿ ಕೊಲೆ ಮಾಡಿದ್ದಅಫ್ತಾಬ್ ತಾನು ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಎಂದು ಕೊಲೆಯಾದ ಮರುಕ್ಷಣದಿಂದಲೇ ತಯಾರಿ ಪ್ರಾರಂಭಿಸಿದ್ದ. ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಲು ನಿರ್ಧರಿಸಿದ್ದ ಆತ, ಅದಕ್ಕಾಗಿ ಅಕ್ಕಪಕ್ಕದವರಿಗೆ ಒಂದು ಸಣ್ಣ ಸುಳಿವು ದೊರೆಯದಂತೆ ಮಾಡಲು ತಯಾರಿ ನಡೆಸಿದ್ದ.

ಮೃತದೇಹವನ್ನು ಕತ್ತರಿಸಲುಅಫ್ತಾಬ್, ಕುರಿ ಕತ್ತರಿಸುವ ಹರಿತವಾದ ಆಯುಧ ತಂದಿದ್ದ. ಕತ್ತರಿಸುವಾಗ ಶಬ್ಧ ಬರುತ್ತದೆ ಎಂದು ಮನೆಯ ನೀರಿನ ಮೋಟಾರ್‌ನ್ನು ಆರಂಭಿಸಿ ಮೃತದೇಹ ಕತ್ತರಿಸಲು ಶುರು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ನ್ಯೂಸ್ 18 ವೆಬ್‌ತಾಣ ವರದಿ ಮಾಡಿದೆ. ಇದರಿಂದ ಹಂತಕನ ಕೃತ್ಯ ಅಕ್ಕಪಕ್ಕದವರಿಗೂ ತಿಳಿದಿರಲಿಲ್ಲ ಎನ್ನಲಾಗಿದೆ.

ADVERTISEMENT

ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತ 26 ವರ್ಷದ ಶೃದ್ಧಾ ಎಂಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಗರದ ತುಂಬ ಚೆಲ್ಲಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್‌ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್‌ ಪೂನವಾಲ ಪ್ರೇಯಸಿ ಶ್ರದ್ಧಾ ವಾಲ್ಕರ್‌ ಅವರಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಬಿಡಿ ಬಿಡಿಯಾಗಿ ಎಸೆದಿದ್ದ.

ಹಲವು ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿರದಿದ್ದ ಶ್ರದ್ಧಾ ಇದೀಗ ಅಮಾನುಷವಾಗಿ ಕೊಲೆಯಾಗಿರುವ ವಿಚಾರವನ್ನು ಕೇಳಿ ಆಘಾತವಾಗಿದೆ. ಈ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪೊಲೀಸರು ಶ್ರದ್ಧಾಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಕೆಯ ಸ್ನೇಹಿತರು ಒತ್ತಾಯಿಸಿದ್ದಾರೆ.

ಇಂತಹ ಭೀಕರ ಕೊಲೆ ಬಗ್ಗೆ ಮನೋವೈದ್ಯರು ಬೆಳಕು ಚೆಲ್ಲಿದ್ದಾರೆ.ಇತ್ತೀಚೆಗೆ ಸಂವಹನದ ಕೊರತೆ ಹಾಗೂ ಹಿಂಸಾತ್ಮಕ ಚಿತ್ರಗಳನ್ನು ವೀಕ್ಷಿಸಿ ಕ್ರೈಂನಲ್ಲಿ ಪಾಲ್ಗೊಳ್ಳುವ ಸಂಗತಿ ಹೆಚ್ಚಾಗುತ್ತಿದೆ ಎಂದು ಮನೋವೈದ್ಯರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಟಿಐ ಸುದ್ದಿ ಸಂಸ್ಥೆ ಮಾತನಾಡಿರುವ ಮನೋವೈದ್ಯೆ ದೀಪ್ತಿ ಪುರಾಣಿಕ್ ಅವರು, ‘ಶೃದ್ಧಾ ಕೊಲೆ ಪ್ರಕರಣದಲ್ಲಿ ವಿಪರೀತ ಕೋಪ, ಸಂವಹನದ ಕೊರತೆ.ಅಪರಾಧವನ್ನು ಸರಳವಾಗಿ ನೋಡುವಂತದ್ದು ಹಾಗೂ ಕ್ರೈಂ ಸಿನಿಮಾಗಳ ವೀಕ್ಷಣೆಯ ಪ್ರಭಾವ ಎದ್ದು ಕಾಣುತ್ತಿದೆ’ ಎಂದು ತಿಳಿಸಿದ್ದಾರೆ.

‘ಅಲ್ಲದೇ ಇಂತಹ ಮನಸ್ಥಿತಿಗೆ ಇಂತದೇ ಒಂದು ಕಾರಣ ಇರುತ್ತದೆ ಎಂದು ನಾವು ನಿರ್ಧಿಷ್ಟವಾಗಿ ಕಂಡುಕೊಳ್ಳುವುದಕ್ಕೆ ಆಗುವುದಿಲ್ಲ. ತಮ್ಮ ಸಂಗಾತಿಗಳನ್ನು ಕೊಲೆ ಮಾಡುವವರು, ಸಮಾಜದಲ್ಲಿ ಬೇರೆಯವನ್ನು ನೋಡಿ ಸಹಿಷ್ಣುತೆಯನ್ನು ಕಲಿತುಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.