ADVERTISEMENT

ಸಿಟ್ಟಿನ ಭರದಲ್ಲಿ ಶ್ರದ್ಧಾ ಹತ್ಯೆ: ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡ ಆಫ್ತಾಬ್

ಶ್ರದ್ಧಾ ಹತ್ಯೆ ಪ್ರಕರಣ: ಆಫ್ತಾಬ್ ಪೂನಾವಾಲಾ ಕಸ್ಟಡಿ ಅವಧಿ ವಿಸ್ತರಣೆ

ಪಿಟಿಐ
Published 26 ನವೆಂಬರ್ 2022, 11:32 IST
Last Updated 26 ನವೆಂಬರ್ 2022, 11:32 IST
ಆಫ್ತಾಬ್ ಅಮೀನ್ ಪೂನಾವಾಲಾ
ಆಫ್ತಾಬ್ ಅಮೀನ್ ಪೂನಾವಾಲಾ   

ನವದೆಹಲಿ: ತನ್ನ ಸಹಜೀವನದ ಸಂಗಾತಿ ಶ್ರದ್ಧಾ ವಾಲಕರ್‌ ಅವರನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಆಫ್ತಾಬ್ ಅಮೀನ್ ಪೂನಾವಾಲಾ ಮಂಗಳವಾರ ದೆಹಲಿ ನ್ಯಾಯಾಲಯವೊಂದರ ಮುಂದೆ ಹೇಳಿಕೆ ನೀಡಿದ್ದು, ‘ಸಿಟ್ಟಿನ ಭರದಲ್ಲಿ ಅಪರಾಧ ಎಸಗಿದೆ’ ಎಂದು ಹೇಳಿದ್ದಾನೆ.

ಆಫ್ತಾಬ್ ಪೊಲೀಸ್ ಕಸ್ಟಡಿಯ ಐದು ದಿನಗಳ ಅವಧಿಯು ಮಂಗಳವಾರ ಮುಗಿದಿದ್ದು, ಆತನನ್ನು ಇಲ್ಲಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಲ್ ಶುಕ್ಲಾ ಅವರ ಎದುರು ಹಾಜರುಪಡಿಸಲಾಯಿತು. ಆಫ್ತಾಬ್‌ನ ಕಸ್ಟಡಿ ಅವಧಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿದ ನ್ಯಾಯಾಧೀಶರು, ಸುಳ್ಳುಪತ್ತೆ ಪರೀಕ್ಷೆ ನಡೆಸಲು ಪೊಲೀಸರಿಗೆ ಅನುಮತಿ ನೀಡಿದರು.

‘ಸಿಟ್ಟಿನ ಭರದಲ್ಲಿ ಅಪರಾಧ ಎಸಗಿದ್ದಾಗಿ ಆಫ್ತಾಬ್ ಕೋರ್ಟ್‌ಗೆ ಹೇಳಿದ್ದು, ಪೊಲೀಸರಿಗೆ ಸಹಕಾರ ನೀಡುತ್ತಿರುವುದಾಗಿಯೂ ತಿಳಿಸಿದ್ದಾನೆ’ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.

ADVERTISEMENT

‘ಕತ್ತರಿಸಿದ ದೇಹದ ಭಾಗಗಳನ್ನು ಎಸೆದ ಸ್ಥಳಗಳನ್ನು ನಿಖರವಾಗಿ ಗುರುತಿಸುವಲ್ಲಿ ತೊಂದರೆ ಎದುರಿಸುತ್ತಿದ್ದೇನೆ. ನನಗೆ ನಗರದ ಭಾಗಗಳು ಅಷ್ಟಾಗಿ ಪರಿಚಯವಿಲ್ಲ ಎಂದು ಆಫ್ತಾಬ್ ಹೇಳಿದ್ದಾನೆ. ದೇಹದ ಭಾಗಗಳ ಹುಡುಕಾಟಕ್ಕಾಗಿ ಆತನನ್ನು ಮಹ್ರೌಲಿ ಅರಣ್ಯ ಹಾಗೂ ಮೈದಾನ್ ಗಡಿಕೊಳದ ಪ್ರದೇಶಗಳಿಗೆ ಪೊಲೀಸರು ಕರೆದೊಯ್ಯಲಿದ್ದಾರೆ’ ಎಂದೂ ವಕೀಲರು ಮಾಹಿತಿ ನೀಡಿದ್ದಾರೆ.

ಅರ್ಜಿ ವಜಾ:ಈ ನಡುವೆ, ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತ ಅರ್ಜಿಯನ್ನು ದೆಹಲಿ ಹೈಕೋರ್ಟ್‌ಮಂಗಳವಾರ ವಜಾಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.