ADVERTISEMENT

ಐಎಸ್‌ ಪ್ರಭಾವ ಬೀರುವ ಮದರಸಾಗಳನ್ನು ಮುಚ್ಚಿ: ವಾಸೀಂ ರಿಜ್ವಿ

ಶಿಯಾ ವಕ್ಫ್‌ ಬೋರ್ಡ್‌ ಮುಖ್ಯಸ್ಥರಿಂದ ಪ್ರಧಾನಿಗೆ ಪ‍ತ್ರ

ಪಿಟಿಐ
Published 22 ಜನವರಿ 2019, 11:14 IST
Last Updated 22 ಜನವರಿ 2019, 11:14 IST
ವಾಸೀಂ ರಿಜ್ವಿ
ವಾಸೀಂ ರಿಜ್ವಿ   

ಲಖನೌ: ’ಮುಸಲ್ಮಾನ ಮಕ್ಕಳ ಮೇಲೆ ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕ ಸಂಘಟನೆ ಪ್ರಭಾವ ಬೀರುವ ದೇಶದ ಎಲ್ಲ ಮದರಸಾಗಳನ್ನು ತಕ್ಷಣವೇ ಮುಚ್ಚಬೇಕು‘ ಎಂದು ಉತ್ತರಪ್ರದೇಶ ಶಿಯಾ ವಕ್ಫ್‌ ಬೋರ್ಡ್‌ ಮುಖ್ಯಸ್ಥ ವಾಸೀಂ ರಿಜ್ವಿ ಅವರು ಪ್ರಧಾನಿ ನರೇಂದ್ರಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

’ಐಎಸ್‌ ಸಂಘಟನೆಯೂ ತಮ್ಮ ಉದ್ದೇಶಕ್ಕಾಗಿ ಮಕ್ಕಳನ್ನು ಗುರಿಯಾಗಿರಿಸಿಕೊಳ್ಳುತ್ತಿದ್ದು, ಕ್ರಮೇಣ ವಿಶ್ವದ ಎಲ್ಲ ಮುಸಲ್ಮಾನರ ಹಿಡಿತ ಪಡೆಯಲು ಪ್ರಯತ್ನಿಸುತ್ತಿದೆ. ಇಂತಹ ಚಟುವಟಿಕೆಗಳು ನಡೆಯುವ ಮದರಸಾಗಳನ್ನು ಮುಚ್ಚದಿದ್ದರೆ, ಮುಂದಿನ 15 ವರ್ಷಗಳಲ್ಲಿ ದೇಶದ ಅರ್ಧದಷ್ಟು ಮುಸಲ್ಮಾನರು ಈ ಸಂಘಟನೆಯ ಬೆಂಬಲಿಗರಾಗುವ ಅಪಾಯವಿದೆ‘ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.

’ಕಾಶ್ಮೀರ ಕಣಿವೆಯಲ್ಲಿ ಐಎಸ್‌ ಸಂಘಟನೆ ಚಟುವಟಿಕೆ ಬೆಳೆಯುತ್ತಿರುವುದು ಕಾಣುತ್ತಿದೆ, ಮದರಸಾಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಇಸ್ಲಾಮಿಕ್‌ ಶಿಕ್ಷಣದ ಹೆಸರಿನಲ್ಲಿ ಮೂಲಭೂತವಾದ ಚಿಂತನೆ ಹರಡಲಾಗುತ್ತಿದ್ದು, ಇದರಿಂದ ದೇಶ ಹಾಗೂ ಮಕ್ಕಳಿಗೂ ಹಾನಿಯಾಗಲಿದೆ‘ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಿಜ್ವಿ ಬೆಂಬಲ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.