ನವದೆಹಲಿ: ‘ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕ, ಕೋವಿಡ್–19ರಿಂದ ಮೃತಪಟ್ಟಿದ್ದಾನೆ. ಈತ ಮಂಡೋಲಿ ಜೈಲಿನಲ್ಲಿ ಕೋವಿಡ್ನಿಂದ ಮೃತಪಟ್ಟ ಎರಡನೇ ಕೈದಿ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
‘ಮಹೇಂದ್ರ ಯಾದವ್ (70) ಮೃತಪಟ್ಟ ಕೈದಿ. ಈತನನ್ನು ಜೈಲಿನ 14ನೇ ನಂಬರ್ ಕೊಠಡಿಯಲ್ಲಿ ಇರಿಸಲಾಗಿತ್ತು. ಇದೇ ಕೊಠಡಿಯಲ್ಲಿದ್ದ ಕನ್ವರ್ ಸಿಂಗ್ ಎಂಬ ಕೈದಿ, ಜುಲೈ 15ರಂದು ನಿದ್ದೆಯಲ್ಲಿಯೇ ಮೃತಪಟ್ಟಿದ್ದ. ನಂತರ ಆತನಿಗೆ ಕೋವಿಡ್–19 ಇರುವುದು ದೃಢಪಟ್ಟಿತ್ತು.ಜುಲೈ 4ರ ಸಂಜೆ ಯಾದವ್ ಮೃತಪಟ್ಟಿದ್ದಾರೆ’ ಎಂದು ಅವರು ತಿಳಿಸಿದರು.
‘ತನ್ನ ಆರೋಗ್ಯ ಸರಿಯಿಲ್ಲ. ಹೃದಯ ಸಂಬಂಧಿ ಸಮಸ್ಯೆ ಇದೆ ಎಂದು ಯಾದವ್ ಹೇಳಿದ್ದ. ಆದ್ದರಿಂದ ಆತನನ್ನು ಜುಲೈ 26ರಂದು ಡಿಡಿಯು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿಂದ ಅದೇ ದಿನ ಎಲ್ಎನ್ಜೆಪಿ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಯಾದವ್ ಕುಟುಂಬಸ್ಥರ ಮನವಿ ಮೇರೆಗೆಜೂನ್ 30ರಂದು ಪೊಲೀಸ್ ಭದ್ರತೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು’ ಎಂದು ಡಿಜಿಪಿ (ಜೈಲು) ಸಂದೀಪ್ ಗೋಯಲ್ ಮಾಹಿತಿ ನೀಡಿದರು.
ಯಾದವ್ 2018 ಡಿಸೆಂಬರ್ನಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಈತನಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.