ADVERTISEMENT

ವಾವರ್‌ ಮಸೀದಿಗೆ ತೆರಳಲು ಯತ್ನ: ಮೂವರು ಮಹಿಳೆಯರು ಸೇರಿ ಆರು ಮಂದಿಯ ಬಂಧನ

ಶಬರಿಮಲೆ ಸಮೀಪದ ಎರುಮೇಲಿಯಲ್ಲಿರುವ ಮಸೀದಿ

ಪಿಟಿಐ
Published 8 ಜನವರಿ 2019, 13:15 IST
Last Updated 8 ಜನವರಿ 2019, 13:15 IST
ವಾವರ್ ಮಸೀದಿ
ವಾವರ್ ಮಸೀದಿ   

ಪಾಲಕ್ಕಾಡ್‌: ಶಬರಿಮಲೆ ಅಯ್ಯಪ್ಪ ದೇಗುಲ ಸಮೀಪದ ಎರುಮೇಲಿಯಲ್ಲಿನ ವಾವರ್ ಮಸೀದಿಗೆ ಭೇಟಿ ನೀಡಲು ಹೊರಟಿದ್ದ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಸೃಷ್ಟಿಸಲು ಈ ಆರೂ ಜನ ಯತ್ನಿಸುತ್ತಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಬಂಧಿಸಿರುವ ಆರು ಮಂದಿಯನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರು ಜನ ತಮಿಳುನಾಡಿನವರಾಗಿದ್ದು,‘ಹಿಂದೂ ಮಕ್ಕಳ್ ಕಚ್ಚಿ’ಪಕ್ಷದ ಸದಸ್ಯರು.

ಶಬರಿಮಲೆಗೆ ಬರುವ ಮಾಲಾಧಾರಿಗಳು ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವ ಮೊದಲು ವಾವರ್‌ ಮಸೀದಿಗೆ ಬಂದು ಹೋಗುತ್ತಾರೆ. ಎರುಮೇಲಿ ನೈನಾರ್ ಜುಮಾ ಮಸೀದಿ ವಾವರ್‌ ಪಲ್ಲಿ (ಮಸೀದಿ) ಎಂದೂ ಪ್ರಸಿದ್ಧಿ. ವಾವರ್ ಅಯ್ಯಪ್ಪ ಸ್ವಾಮಿಯ ಜೊತೆಗಾರನಾಗಿದ್ದ ಎನ್ನಲಾಗಿದೆ.

ADVERTISEMENT

ನವೆಂಬರ್‌ನಿಂದ– ಜನವರಿವರೆಗೆ ಶಬರಿಮಲೆಗೆ ಬರುವ ಅಯ್ಯಪ್ಪ ಯಾತ್ರಿಗಳು ವಾವರ್ ಮಸೀದಿಗೆ ಪ್ರವೇಶ ಮಾಡುವುದಿಲ್ಲ. ಆದರೆ ಅದಕ್ಕೆ ಸುತ್ತುಹಾಕಿ ಹೋಗುತ್ತಾರೆ. ಕಾಣಿಕೆ ಅರ್ಪಿಸಿ, ಹಣ್ಣುಕಾಯಿ ಒಡೆದು ಪ್ರಾರ್ಥಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.