ಮುಂಬೈ: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಹೆಸರು ತೆಗೆದುಹಾಕಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಗುಜರಾತ್ ಎಟಿಎಸ್ನ ಮಾಜಿ ಮುಖ್ಯಸ್ಥ ಡಿ.ಜಿ. ವಂಝಾರ ಮತ್ತು ಗುಜರಾತ್ ಹಾಗೂ ರಾಜಸ್ಥಾನದ ಇತರೆ ನಾಲ್ವರು ಪೊಲೀಸ್ ಅಧಿಕಾರಿಗಳು ನಿರಾಳರಾಗಿದ್ದಾರೆ.
ಸೊಹ್ರಾಬುದ್ದೀನ್ ಶೇಖ್, ಅವನ ಪತ್ನಿ ಕೌಸರ್ಬೀ ಹಾಗೂ ಸಹಚರ ತುಳಸಿರಾಂ ಪ್ರಜಾಪತಿ ಎನ್ಕೌಂಟರ್ ಪ್ರಕರಣದಲ್ಲಿ ಈ ಅಧಿಕಾರಿಗಳ ಹೆಸರು ಕೈಬಿಟ್ಟಿರುವುದನ್ನು ಪ್ರಶ್ನಿಸಿ, ಸೊಹ್ರಾಬುದ್ದೀನ್ ಸಹೋದರ ರುಬಾಬುದ್ದೀನ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದ ನ್ಯಾಯಾಧೀಶ ಎ.ಎಂ. ಬಾದರ್ ವಜಾಗೊಳಿಸಿದರು.
ಗುಜರಾತ್ನ ರಾಜಕುಮಾರ್ ಪಾಂಡಿಯನ್ ಮತ್ತು ಎನ್.ಕೆ.ಆಮಿನ್ ಹಾಗೂ ರಾಜಸ್ಥಾನದ ಎಂ.ಎನ್. ದಿನೇಶ್ ಮತ್ತು ದಲ್ಪತ್ ಸಿಂಗ್ ರಾಥೋಡ್ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪೊಲೀಸ್ ಅಧಿಕಾರಿಗಳು ಮತ್ತು ಇತರೆ 33 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಈವರೆಗೆ 15 ಜನರನ್ನು ಆರೋಪಮುಕ್ತಗೊಳಿಸಲಾಗಿದೆ. ಈ ಪೈಕಿ, 14 ಜನ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಷಾ ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.