ಶ್ರೀನಗರ: ಜಮ್ಮು ಕಾಶ್ಮೀರದ ಗಡಿ ಭಾಗಗಳಲ್ಲಿ ಕದನ ವಿರಾಮ ಉಲ್ಲಂಘನೆಯಲ್ಲಿ ತೊಡಗಿರುವ ಪಾಕಿಸ್ತಾನ, ಗುರುವಾರ ರಜೌರಿಯಲ್ಲಿ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧ ಹುತಾತ್ಮರಾಗಿದ್ದಾರೆ.
ಸುಂದರ್ಬನಿ ವಲಯದಲ್ಲಿ ಪಾಕಿಸ್ತಾನ ನಡೆಸಿರುವ ಶೆಲ್ ದಾಳಿಯಲ್ಲಿ ರೈಫಲ್ಮ್ಯಾನ್ ಯಶ್ ಪೌಲ್(24) ಹುತಾತ್ಮರಾಗಿದ್ದಾರೆ. ಜನವರಿಯಿಂದ ಈವರೆಗೂ ಗಡಿ ನಿಯಂತ್ರಣ ರೇಖೆಯಲ್ಲಿ 110 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.
ಸೋಮವಾರ ರಾತ್ರಿ ಪಾಕಿಸ್ತಾನ ಸೇನೆ ಅಖನೂರ್ ಮತ್ತು ಸುಂದರ್ಬನಿ ವಲಯದಲ್ಲಿ ಬಾಂಬ್ ದಾಳಿ, ಗುಂಡಿನ ದಾಳಿ ನಡೆಸಿತ್ತು ಎಂದು ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ. ದಾಳಿಯಲ್ಲಿ ಸೇನೆಯ ಯೋಧ ಸಾವಿಗೀಡಾದರು ಹಾಗೂ ನಾಲ್ಕು ಮಂದಿ ಇತರರು ಗಾಯಗೊಂಡಿದ್ದರು. ಆ ದಾಳಿಯಲ್ಲಿ ರೈಫಲ್ಮ್ಯಾನ್ ಕರಂಜೀತ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದರು, ರಕ್ತಸ್ರಾವ ಮತ್ತು ಗಾಯದ ತೀವ್ರತೆಯಿಂದ ಮೃತಟ್ಟಿದ್ದಾಗಿ ವಕ್ತಾರರು ತಿಳಿಸಿದ್ದಾರೆ.
ಫೆ.14ರಂದು ಉಗ್ರರುಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಿಆರ್ಪಿಎಫ್ನ 40 ಸಿಬ್ಬಂದಿ ಸಾವಿಗೀಡಾದರು. ಇದಕ್ಕೆ ಪ್ರತಿಯಾಗಿ ಭಾರತದ ವಾಯುಪಡೆ ಫೆ.26ರಂದು ಬಾಲಾಕೋಟ್ನ ಜೈಷ್–ಎ–ಮೊಹಮ್ಮದ್ ಉಗ್ರ ಶಿಬಿರದ ಮೇಲೆ ದಾಳಿ ನಡೆಸಿತ್ತು. ಆ ನಂತರದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ತಾರಕ್ಕೇರಿದೆ.
ಕಳೆದ 15 ವರ್ಷಗಳಿಗೆ ಹೋಲಿಸಿದರೆ ಭಾರತ–ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು 2018ರಲ್ಲಿ ಅತಿ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿವೆ. ಕಳೆದ ವರ್ಷ ಒಟ್ಟು 2,936 ಬಾರಿ ಕದನ ವಿರಾಮ ಉಲ್ಲಂಘನೆಯಾಗಿರುವುದು ದಾಖಲಾಗಿದೆ. 2003ರಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.