ನವದೆಹಲಿ: ಪಕ್ಷವನ್ನು ಬಲಪಡಿಸುವುದೂ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಕೆಲವು ತಿಂಗಳ ಹಿಂದೆ ತಮಗೆ ಪತ್ರ ಬರೆದಿದ್ದ ಪಕ್ಷದ ಮುಖಂಡರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಸಭೆ ನಡೆಸಿದರು.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕಗೊಂಡ ಬಳಿಕ, ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ನಾಯಕರನ್ನು ಖುದ್ದಾಗಿ ಭೇಟಿಯಾಗಿರುವುದು ಇದೇ ಮೊದಲು. ರಾಹುಲ್ ಗಾಂಧಿ, ಸೋನಿಯಾ ಅವರ ಕೆಲ ನಿಕಟವರ್ತಿಗಳೂ ಪಾಲ್ಗೊಂಡಿದ್ದರು.
ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದವರನ್ನು ಸಮಾಧಾನಪಡಿಸುವ ಉದ್ದೇಶದೊಂದಿಗೆ ಆಯೋಜಿಸಲಾಗಿರುವ ಮೊದಲ ಸಭೆಯೂ ಇದಾಗಿದೆ.
ಪತ್ರ ಬರೆದವರ ಪೈಕಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮೇಲ್ಮನೆಯಲ್ಲಿ ಪಕ್ಷದ ಉಪನಾಯಕ ಆನಂದ್ ಶರ್ಮಾ, ಮಾಜಿ ಮುಖ್ಯಮಂತ್ರಿಗಳಾದ ಭೂಪಿಂದರ್ ಸಿಂಗ್ ಹೂಡಾ, ಪೃಥ್ವಿರಾಜ್ ಚವಾಣ್ ಮತ್ತು ಸಂಸದರಾದ ಮನೀಶ್ ತಿವಾರಿ , ವಿವೇಕ್ ತಂಖಾ ಮತ್ತು ಶಶಿ ತರೂರ್ ಸಭೆಗೆ ಹಾಜರಾಗಿದ್ದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ನಾಥ್ ಮತ್ತು ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಅವರೂ ಪಾಲ್ಗೊಂಡಿದ್ದರು.
ಪಕ್ಷ ಸಂಘಟನೆ ಕುರಿತ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಸಲು ಪಕ್ಷ ಈಗಾಗಲೇ ನಿರ್ಧರಿಸಿದ್ದು, ಅದರ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಸೋನಿಯಾ ಗಾಂಧಿ ಇತರ ನಾಯಕರನ್ನೂ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.