ADVERTISEMENT

ಸೋನು ಸೂದ್‌ರಿಂದ 'ಸ್ಮಾರ್ಟ್‌’ ಆದ ಕುಗ್ರಾಮದ ಸರ್ಕಾರಿ ಶಾಲೆ ಮಕ್ಕಳು!

ಏಜೆನ್ಸೀಸ್
Published 26 ಆಗಸ್ಟ್ 2020, 10:48 IST
Last Updated 26 ಆಗಸ್ಟ್ 2020, 10:48 IST
ನಟ ಸೋನು ಸೂದ್ ಅವರು ಕಳಿಸಿಕೊಟ್ಟಿರುವ ಸ್ಮಾರ್ಟ್‌ಗಳ ಮೂಲಕ ವಿದ್ಯಾರ್ಥಿಗಳ ಸಂವಹನ
ನಟ ಸೋನು ಸೂದ್ ಅವರು ಕಳಿಸಿಕೊಟ್ಟಿರುವ ಸ್ಮಾರ್ಟ್‌ಗಳ ಮೂಲಕ ವಿದ್ಯಾರ್ಥಿಗಳ ಸಂವಹನ   

ಸ್ಮಾರ್ಟ್‌ಫೋನ್‌ಗಳ ಕೊರತೆಯ ಕಾರಣ ಹರಿಯಾಣ ರಾಜ್ಯದ ಕುಗ್ರಾಮವೊಂದರ ಸರ್ಕಾರಿ ಶಾಲೆ ಮಕ್ಕಳು ಆನ್‌ಲೈನ್ ‌ಕ್ಲಾಸ್‌ಗಾಗಿ ಕಿಲೋಮೀಟರ್‌ಗಟ್ಟಲೆ ನಡೆದು ಹೋಗುತ್ತಿದ್ದರು. ಈ ಮಕ್ಕಳ ಸಂಕಷ್ಟ ಹೇಗೊ ಬಾಲಿವುಡ್‌ ನಟ ಸೋನುಸೂದ್ ಅವರ ಗಮನಕ್ಕೆ ಬಂತು. ವಿಷಯ ತಿಳಿದ ಸೋನು ಸೂದ್‌ ಆ ಶಾಲೆಯ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳವ್ಯವಸ್ಥೆ ಮಾಡಿದರು!

ಶಾಲೆಯ ಮಕ್ಕಳು ಅನುಭವಿಸುತ್ತಿದ್ದ ಈ ಸಂಕಷ್ಟವನ್ನು ವಿವರಿಸಿ ಹೀನಾ ರೋಹಟಕಿ ಎಂಬುವವರು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಗಮನಿಸಿದ್ದ ನಟ ಸೋನುಸೂದ್‌, ತನ್ನ ಗೆಳೆಯ ಕಿರಣ್ ಗಿಲ್ಹೋತ್ರ ಅವರ ಮೂಲಕ ಆ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದರು. ಬುಧವಾರ ಮೊರ್ನಿ ಗ್ರಾಮದ ಶಾಲೆಯ ಮುಖ್ಯಶಿಕ್ಷಕರ ಕೈಗೆ ಸ್ಮಾರ್ಟ್‌ಫೋನ್‌ಗಳು ತಲುಪಿದವು.

ಮುಖ್ಯಶಿಕ್ಷಕರು ಮಕ್ಕಳಿಗೆ ಸ್ಮಾರ್ಟ್‌ಪೋನ್ ಕೊಟ್ಟ ಮೇಲೆ ವಿದ್ಯಾರ್ಥಿಗಳು ವಿಡಿಯೊ ಕಾಲ್‌ ಮೂಲಕ ಸೋನುಸೂದ್ ಅವರೊಂದಿಗೆ ಮಾತನಾಡಿ ತಮಗಾಗುತ್ತಿರುವ ಸಂತಸವನ್ನು ಹಂಚಿಕೊಂಡಿರು. ಮಕ್ಕಳ ಈ ಸಂತಸದ ಕ್ಷಣದ ವಿಡಿಯೊವನ್ನು ಹೀನಾ ರೋಹಟಕಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಟ್ಯಾಗ್‌ ಮಾಡಿದ್ದಾರೆ. ’ನಟ ಸೋನು ಸೂದ್ ಮತ್ತು ಅವರ ಸ್ನೇಹಿತ ಕರಣ್ ಗಿಲ್ಹೋತ್ರಾ ಅವರಿಂದ ಕರೆ ಬಂದಾಗ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾದರು. ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳು ಸಿಕ್ಕಿವೆ. ಅವರಿನ್ನು ಆನ್‌ಲೈನ್ ಕ್ಲಾಸ್‌ಗಾಗಿ ಕಿಲೋಮೀಟರ್‌ಗಟ್ಟಲೆ ಹೋಗುವುದಿಲ್ಲ ಎಂದು ಶಾಲೆಯ ಮುಖ್ಯಶಿಕ್ಷಕರು ಹೇಳಿದ್ದಾರೆಂದು ಹೀನಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಈ ಕುರಿತು ಟ್ವೀಟ್‌ ಮಾಡಿರುವ ಸೋನು, 'ಮೊರ್ನಿ ಹಳ್ಳಿಯ ಮಕ್ಕಳು ಸ್ಮಾರ್ಟ್‌ಫೋನ್‌ ಮೂಲಕ ಆನ್‌ಲೈನ್ ಕ್ಲಾಸ್ ಕಲಿಯುತ್ತಿರುವುದನ್ನು ನೋಡುತ್ತಾ, ಈ ದಿನವನ್ನು ಆರಂಭಿಸಿದ್ದೇನೆ. ತುಂಬಾ ಖುಷಿಯಾಗಿ ಈ ದಿನ ಆರಂಭವಾಗಿದೆ’ ಎಂದು ಬರೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸ್ಮಾರ್ಟ್‌ಫೋನ್ ಅಗತ್ಯವನ್ನು ಗಮನಕ್ಕೆ ತಂದ ಹೀನಾ ರೋಹಟಕಿ ಮತ್ತು ಫೋನ್‌ಗಳು ತಲುಪಲು ಸಹಾಯ ಮಾಡಿದ ಕಿರಣ್ ಗಿಲ್ಹೋತ್ರ ಅವರಿಗೂ ಅಭಿನಂದನೆ ತಿಳಿಸಿದ್ದಾರೆ.ಹೀನಾ ಅವರ ಟ್ವೀಟ್‌ ಅನ್ನು ಸೋನುಸೂದ್ ಕೂಡ‌ ತಮ್ಮ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ನಟ ಸೋನುಸೂದ್‌, ಕೊರೊನಾ– ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ಊಟ–ವಸತಿ ವ್ಯವಸ್ಥೆ ಮಾಡಿದ್ದರು. ಮಾತ್ರವಲ್ಲ, ರೈಲು, ಬಸ್ಸು, ವಿಮಾನಗಳ ಮೂಲಕ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ತಮ್ಮ ಊರುಗಳಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಬೇರೆ ಬೇರೆ ದೇಶಗಳಲ್ಲಿ ಸಿಕ್ಕಿಕೊಂಡಿದ್ದ ಭಾರತದ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮವರನ್ನು ಸೇರಲು ಸಹಾಯ ಮಾಡಿದ್ದರು. ಈ ಮೊದಲು ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೂ ಸಹಾಯಸ್ತ ಚಾಚಿದ್ದ ಸೋನುಸೂದ್, ಈಗ ಮತ್ತೊಂದು ಅಂಥದ್ದೇ ಸಂಕಷ್ಟದಲ್ಲಿದ್ದ ಮಕ್ಕಳ ಮುಖದಲ್ಲಿ ನಗು ಅರಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.