ಚೆನ್ನೈ: ‘ತಂದೆಯ ಮೃತದೇಹವನ್ನು ಮನೆಗೆ ಸ್ಥಳಾಂತರಿಸುವ ಮೊದಲು ಚಿಕಿತ್ಸೆಯ ಉಳಿದ ಮೊತ್ತವನ್ನು ಪಾವತಿಸಲು ಬಿಲ್ ಕೇಳಿದ ಸಂದರ್ಭದಲ್ಲಿ ಆಸ್ಪತ್ರೆಯು ಹಣ ತೆಗೆದುಕೊಳ್ಳಲು ನಿರಾಕರಿಸಿದೆ’ಎನ್ನುವ ಮೂಲಕಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮಗ ಎಸ್.ಪಿ.ಚರಣ್ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನದ ನಂತರ ಆಸ್ಪತ್ರೆಯ ವೆಚ್ಚದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳ ಕುರಿತು ಚರಣ್ ಭಾವನಾತ್ಮಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಹಾಗೂ ಕುಟುಂಬದ ನಡುವಿನ ಹಣಕಾಸು ವ್ಯವಹಾರ ವೈಯಕ್ತಿಕವಾಗಿದ್ದು, ಹಣ ನೀಡದೇ ಮೃತದೇಹವನ್ನು ನೀಡಲು ಆಸ್ಪತ್ರೆ ನಿರಾಕರಿಸಿತ್ತು ಎನ್ನುವ ವರದಿಯನ್ನು ಚರಣ್ ನಿರಾಕರಿಸಿದ್ದಾರೆ.
‘ತಂದೆ ಮೃತಪಟ್ಟು ಕೇವಲ ಮೂರು ದಿನಗಳಾಗಿವೆ. ಇಂಥ ಸಂದರ್ಭದಲ್ಲಿ ನಾನು ತಾಯಿಯನ್ನು ಸಮಾಧಾನಪಡಿಸಲೇ ಅಥವಾ ಇಂಥ ವದಂತಿಗಳಿಗೆ ಸ್ಪಷ್ಟನೆ ನೀಡುತ್ತಾ ಇರಲೇ’ ಎಂದು ಚರಣ್ ವದಂತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
‘ಪ್ರತಿ ವಾರ ನಾವು ಬಿಲ್ ಪಾವತಿಸುತ್ತಿದ್ದೆವು. ಅದರಲ್ಲಿ ಚಿಕಿತ್ಸೆಯ ಒಂದು ಭಾಗಕ್ಕೆ ವಿಮೆ ಇತ್ತು. ತಂದೆ ಮೃತಪಟ್ಟ ನಂತರ ನಮ್ಮ ಅಕೌಂಟೆಂಟ್ ಆಸ್ಪತ್ರೆಯ ಬಳಿ ಬಾಕಿ ಉಳಿದಿರುವ ಬಿಲ್ ಕೇಳಿದ್ದರು. ಆದರೆ ಹಣ ತೆಗೆದುಕೊಳ್ಳಲು ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿತ್ತು’ ಎಂದು ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆಯ ವೈದ್ಯರ ಜೊತೆಗೂಡಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಕೋವಿಡ್–19 ದೃಢಪಟ್ಟ ಬಳಿಕ ಚಿಕಿತ್ಸೆಗೆ ದಾಖಲಾಗಿದ್ದ ಎಸ್ಪಿಬಿ, 52 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.