ADVERTISEMENT

ಮೈಮೇಲೆ ರೋಗ ನಿರೋಧಕಗಳ ಸಿಂ‍ಪಡಣೆ ಅಪಾಯಕಾರಿ: ಆರೋಗ್ಯ ಸಚಿವಾಲಯ ಎಚ್ಚರಿಕೆ

ಪಿಟಿಐ
Published 20 ಏಪ್ರಿಲ್ 2020, 12:46 IST
Last Updated 20 ಏಪ್ರಿಲ್ 2020, 12:46 IST
ರೋಗ ನಿರೋಧಕಗಳ ಸಿಂ‍ಪಡಣೆ
ರೋಗ ನಿರೋಧಕಗಳ ಸಿಂ‍ಪಡಣೆ   

ನವದೆಹಲಿ: ಮೈಮೇಲೆ ರಾಸಾಯನಿಕ ರೋಗನಿರೋಧಕಗಳ ಸಿಂಪಡಣೆಯಿಂದ ದೈಹಿಕ ಅಥವಾ ಮಾನಸಿಕ ಹಾನಿ ಉಂಟಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

ಸೋಂಕು ತಡೆಗಟ್ಟುವ ಉದ್ದೇಶದಿಂದ ದೇಶದ ಹಲವು ಭಾಗಗಳ ತರಕಾರಿ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆಯಂಥ ಸ್ಥಳಗಳಲ್ಲಿ ರೋಗನಿರೋಧಕ(ಸ್ಯಾನಿಟೈಸೇಷನ್‌) ಸುರಂಗಗಳನ್ನು ಸ್ಥಾಪಿಸಿರುವ ಸಂದರ್ಭದಲ್ಲೇ ಸಚಿವಾಲಯ ಈ ಎಚ್ಚರಿಕೆ ನೀಡಿದೆ. ‘ಈ ರೀತಿ ರೋಗನಿರೋಧಕಗಳನ್ನು ಸಿಂಪಡಣೆ ಮಾಡುವುದರಿಂದ ಜನರಲ್ಲಿ ನಾವು ಸುರಕ್ಷಿತರಾಗಿದ್ದೇವೆ ಎನ್ನುವ ತಪ್ಪು ಕಲ್ಪನೆ ಮೂಡುತ್ತದೆ. ಹೀಗಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗೆ ಕೈತೊಳೆಯುವ ಅಭ್ಯಾಸವನ್ನು ಅವರು ಬಿಡುತ್ತಾರೆ’ ಎಂದು ಸಚಿವಾಲಯ ತಿಳಿಸಿದೆ.

‘ಹಲವು ಜಿಲ್ಲಾಡಳಿತಗಳು, ಸ್ಥಳೀಯ ಜನಪ್ರತಿನಿಧಿಗಳು ಇಂಥ ಸುರಂಗಗಳನ್ನು ಸ್ಥಾಪಿಸಿ ಸೋಡಿಯಂ ಹೈಪೊಕ್ಲೋರೈಟ್‌ ರಾಸಾಯನಿಕವನ್ನು ಸಿಂಪಡಿಸುತ್ತಿದ್ದಾರೆ. ಇಂಥ ದ್ರಾವಣವನ್ನು ಕೇವಲ ನಿರ್ಜೀವ ವಸ್ತುಗಳ ಮೇಲಷ್ಟೇ ಸಿಂಪಡಿಸಬೇಕು. ಕೋವಿಡ್‌–19 ಸೋಂಕಿತರು ಅಥವಾ ಶಂಕಿತರು ಮುಟ್ಟಿದ ವಸ್ತುಗಳು ಹಾಗೂ ನೆಲೆಸಿರುವ ಜಾಗವನ್ನು ಸ್ವಚ್ಛಗೊಳಿಸಲಷ್ಟೇ ಇದನ್ನು ಉಪಯೋಗಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.

ADVERTISEMENT

‘ಕ್ಲೋರಿನ್‌ ಅಥವಾ ಸೋಡಿಯಂ ಹೈಪೊಕ್ಲೋರೈಟ್‌ ದ್ರಾವಣವನ್ನು ಸಿಂಪಡಣೆ ಮಾಡುವುದರಿಂದ ಮೈಮೇಲೆ ಅಥವಾ ಬಟ್ಟೆಯಲ್ಲಿದ್ದ ಕೊರೊನಾ ವೈರಸ್‌ ಸಾಯುತ್ತದೆ’ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಈ ರಾಸಾಯನಿಕಗಳಿಂದ ಕಣ್ಣಿಗೆ, ಚರ್ಮಕ್ಕೆ ಹಾನಿಯಾಗುತ್ತದೆ. ಇವುಗಳನ್ನು ಉಸಿರಾಡುವುದರಿಂದ ಮೂಗು, ಗಂಟಲು ಹಾಗೂ ಶ್ವಾಸಕೋಶದಲ್ಲಿ ಸಮಸ್ಯೆ ಉದ್ಭವಿಸಲಿದೆ’ ಎಂದು ಸಚಿವಾಲಯ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.