ADVERTISEMENT

ಶ್ರೀನಗರ: ವಿಚಾರ ಸಂಕಿರಣ ರದ್ದುಪಡಿಸಿದ ಸೇನೆ

ಯುಸಿಸಿ: ಆಕ್ಷೇಪ ವ್ಯಕ್ತಪಡಿಸಿದ್ದ ರಾಜಕೀಯ ಪಕ್ಷಗಳು

ಪಿಟಿಐ
Published 23 ಮಾರ್ಚ್ 2024, 23:10 IST
Last Updated 23 ಮಾರ್ಚ್ 2024, 23:10 IST

ಶ್ರೀನಗರ : ಭಾರತೀಯ ದಂಡ ಸಂಹಿತೆ ಮತ್ತು ಏಕ ರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಜನರಿಗೆ ಅರಿವು ಮೂಡಿಸಲು ಭಾರತೀಯ ಸೇನೆ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ರದ್ದು ಪಡಿಸಲಾಗಿದೆ.

ವಿಚಾರ ಸಂಕಿರಣವನ್ನು ಇದೇ 26ರಂದು ಕಾಶ್ಮೀರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಿಗದಿಪಡಿಸಲಾಗಿತ್ತು. ಶುಕ್ರವಾರ ತಡರಾತ್ರಿ ಮಾಧ್ಯಮಗಳಿಗೆ ಆಹ್ವಾನ ಪತ್ರಿಕೆಯನ್ನು ಸೇನೆ ಕಳುಹಿಸಿತ್ತು. 

ಸೇನೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿಪಿ ಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದಕ್ಕೆ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆಯು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

ADVERTISEMENT

ಇದರ ಬೆನ್ನಲ್ಲೇ, ‘ಕಾಶ್ಮೀರ ವಿಶ್ವ ವಿದ್ಯಾನಿಲಯದಲ್ಲಿ ಮಾರ್ಚ್ 26ರಂದು ಕಾಶ್ಮೀರ ಕಾನೂನು ತಜ್ಞರಿಂದ ಕಾನೂನು ಅರಿವು ಮೂಡಿಸಲು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಮಾದರಿ ನೀತಿ ಸಂಹಿತೆ ಜಾರಿಯಿಂದಾಗಿ ರದ್ದುಗೊಳಿಸಲಾಗಿದೆ’ ಎಂದು ಶ್ರೀನಗರದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೋಜ್ ಸಾಹು ಹೇಳಿದ್ದಾರೆ.

ಕಾಶ್ಮೀರದಂತಹ ಸೂಕ್ಷ್ಮ ಸ್ಥಳದಲ್ಲಿ, ಏಕರೂಪ ನಾಗರಿಕ ಸಂಹಿತೆಯಂತಹ ‘ವಿಭಜಕ’ ವಿಷಯದಲ್ಲಿ ಸೇನೆಯ ಒಳಗೊಳ್ಳುವಿಕೆ ಎಷ್ಟು ಸಮಂಜಸ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.