ಚೆನ್ನೈ: ಡಿಎಂಕೆ ಪಕ್ಷದ ವಿರುದ್ಧ ಗೃಹ ಸಚಿವ ಅಮಿತ್ ಶಾ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್, ‘ತಮಿಳುನಾಡಿನಲ್ಲಿ ಬಿಜೆಪಿ, ಆಡಳಿತಾರೂಢ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಭ್ರಷ್ಟಾಚಾರದ ಪರ ನಿಂತಿದೆ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ‘ಭ್ರಷ್ಟಾಚಾರದಲ್ಲಿ (ಕರಪ್ಷನ್, ಕಮಿಷನ್ ಮತ್ತು ಕಲೆಕ್ಷನ್ನಲ್ಲಿ) ಮುಳುಗಿರುವ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ಸೆಲ್ವಂ ಅವರೊಂದಿಗೆ ಬಿಜೆಪಿ ಕೈಜೋಡಿಸಿದೆ. ಈ ನಡೆ ಯಾವ ಪಕ್ಷ ಭ್ರಷ್ಟಾಚಾರ ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ‘ ಎಂದು ಸ್ಟಾಲಿನ್ ಹೇಳಿದರು. ಕಳೆದ ತಿಂಗಳು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರು ಈ ಇಬ್ಬರೊಂದಿಗೆ ಕೈ ಜೋಡಿಸಿದ್ದನ್ನು ಅವರು ಉಲ್ಲೇಖಿಸಿದರು.
‘ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಭಾನುವಾರದಿಂದ ಸೀಟು ಹಂಚಿಕೆ ಕುರಿತು ಮಾತುಕತೆ ಆರಂಭವಾಗಿದೆ. ಪಕ್ಷದ ಪ್ರಣಾಳಿಕೆ ಕೂಡ ಸಿದ್ಧವಾಗುತ್ತಿದೆ‘ ಎಂದು ಸ್ಟಾಲಿನ್ ಹೇಳಿದ್ದಾರೆ.
ಭ್ರಷ್ಟಾಚಾರದ ವಿಷಯಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಸ್ಟಾಲಿನ್ ಅವರನ್ನು ಅಪಹಾಸ್ಯ ಮಾಡಿದ ಗೃಹ ಸಚಿವ ಅಮಿತ್ ಶಾ, ಭಾನುವಾರ ವಿಲ್ಲುಪುರಂನಲ್ಲಿ ನಡೆದ ರ್ಯಾಲಿಯಲ್ಲಿ ‘2 ಜಿ ತರಂಗಾಂತರ ಹಂಚಿಕೆ ಮಾಡಿದವರು ಯಾರು‘ ಎಂದು ಎಐಎಡಿಎಂಕೆ ಪಕ್ಷದವರನ್ನು ಪ್ರಶ್ನಿಸಿದರು. ಈ ಪ್ರಕರಣಗಳಲ್ಲಿ ಒಳ ಹೊಕ್ಕು ನೋಡಿದರೆ, ಉತ್ತರ ತಿಳಿಯುತ್ತದೆ‘ ಎಂದು ತಿಳಿಸಿದರು.
‘ಕಾಂಗ್ರೆಸ್ ಪಕ್ಷ ₹12 ಲಕ್ಷ ಕೋಟಿ ಮೌಲ್ಯದ ಹಗರಣಗಳನ್ನು ಮಾಡಿದಾಗ, ಡಿಎಂಕೆ – ಕಾಂಗ್ರೆಸ್ ನೇತೃತ್ವದ ಭಾಗವಾಗಿತ್ತು‘ ಎಂದು ಶಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.