ನವದೆಹಲಿ: ಭಾರತದಿಂದ ಪಾಕಿಸ್ತಾನಕ್ಕೆ ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವ ನೀರನ್ನು ತಡೆದು ನಮ್ಮ ರೈತರ ವ್ಯವಸಾಯಕ್ಕೆ , ಕೈಗಾರಿಕಾ ಉದ್ದೇಶಗಳಿಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಆಗಿರುವ ಒಪ್ಪಂದದ ಪ್ರಕಾರ ನೀರನ್ನು ಪಾಕಿಸ್ತಾನಕ್ಕೆ ಹರಿಸಲಾಗುತ್ತಿದೆ. ಇದನ್ನು ಆದ್ಯತೆ ಮೇರೆಗೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಭಾರತದ ಹಲವು ನದಿಗಳ ಮೂಲಕಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ ಎಂದು ಹೇಳಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆಮಾತನಾಡಿರುವ ಸಚಿವ ಗಜೇಂದ್ರ ಸಿಂಗ್,ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಪಾಕಿಸ್ತಾನ ಆಂತರರಾಷ್ಟ್ರೀಯ ಮಟ್ಟದ ವಿಷಯವನ್ನಾಗಿ ಮಾಡಲು ಹೊರಟಿದೆ ಎಂದಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿಪಾಕಿಸ್ತಾನ ಹಿಂಬದಿಯಿಂದ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ. ಇದರಿಂದಾಗಿ ಭಾರತದಿಂದ ಹರಿಯುತ್ತಿರುವ ನೀರನ್ನು ನಿಲ್ಲಿಸುವುದಾಗಿ ತಿಳಿಸಿದ್ದರು.
1960ರಲ್ಲಿ ಇಂಡಸ್ ನೀರು ಒಪ್ಪಂದ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ನಡೆದಿತ್ತು. ಈ ಒಪ್ಪಂದಕ್ಕೆ ಅಂದಿನ ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗೂ ಪಾಕಿಸ್ತಾನ ಅಧ್ಯಕ್ಷ ಅಯೂಬ್ ಖಾನ್ ಸಹಿ ಮಾಡಿದ್ದರು. ಈ ಒಪ್ಪಂದದಂತೆ ಪೂರ್ವ ಭಾರತದ ನದಿಗಳಾದ ರಾವಿ, ಬೀಸ್ ಮತ್ತು ಸಟ್ಲೆಜ್ ನದಿಗಳ ಮೇಲೆ ಭಾರತಸಂಪೂರ್ಣ ಹಕ್ಕು ಹೊಂದಿದೆ. ಇದಕ್ಕೆ ಬದಲಾಗಿ ಭಾರತದ ಪಶ್ಚಿಮ ಭಾಗದ ನದಿಗಳಾದ ಇಂಡಸ್, ಚಿನಾಬ್ ಹಾಗೂ ಜೆಹಲಮ್ ನದಿಗಳಿಂದ ಪಾಕಿಸ್ತಾನಕ್ಕೆ ಹರಿಯುವ ನೀರಿಗೆ ಭಾರತ ಯಾವುದೇ ಅಡ್ಡಿ ಪಡಿಸುವಂತಿಲ್ಲ ಎಂದು ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.