ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ಪ್ರತಿಭಟನಾದ್ಯೋತಕವಾಗಿ ಸಹಿ ಅಭಿಯಾನ ನಡೆಸುವುದಾಗಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಘೋಷಣೆ ಮಾಡಿದ್ದರು. ಇದನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಿದ್ಯಾರ್ಥಿಗಳು ಮುಗ್ಧರಲ್ಲ. ಅಭಿಯಾನದ ಹಿಂದಿರುವ ಉದ್ದೇಶವನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠವು ಅರ್ಜಿದಾರ ಎಂ.ಎಲ್. ರವಿ ಅವರಿಗೆ ಹೇಳಿದೆ. ಈ ರೀತಿಯ ವಿಷಯಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಡಿ ಬರುವುದಿಲ್ಲ ಎಂದೂ ಹೇಳಿದೆ.
ನೀಟ್ ವಿರುದ್ಧ 50 ದಿನಗಳಲ್ಲಿ 50 ಲಕ್ಷ ಸಹಿ ಸಂಗ್ರಹಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಶಾಲಾ ಮಕ್ಕಳು ಈಗಾಗಲೇ ಒತ್ತಡದಲ್ಲಿದ್ದಾರೆ. ಅವರು ಪರೀಕ್ಷೆ ಬರೆಯಬೇಕಿದೆ. ಈ ಅಭಿಯಾನವು ಅವರನ್ನು ಬಾಧಿಸುತ್ತದೆ. ಆಡಳಿತಾರೂಢ ಪಕ್ಷವು ಈ ಪರಿಸ್ಥಿತಿಯ ಅನುಕೂಲ ಪಡೆಯುತ್ತಿದೆ ಮತ್ತು ಮಕ್ಕಳನ್ನು ಬೆದರಿಸುತ್ತಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಹೇಳಿದ್ದರು. ‘ಇಂತಹ ಅಭಿಯಾನಗಳು ಯಾವ ನೀತಿಗಳ ಮೇಲೂ ಪರಿಣಾಮ ಬೀರುವುದಿಲ್ಲ. ಈ ರೀತಿಯ ಪ್ರವೇಶ ಪರೀಕ್ಷೆಗಳನ್ನು ಅಖಿಲ ಭಾರತ ಮಟ್ಟದಲ್ಲೇ ಏರ್ಪಡಿಸಬೇಕು’ ಎಂದು ನ್ಯಾಯಪೀಠ ಹೇಳಿದೆ.
‘ಅದೃಷ್ಟವಶಾತ್, ಈ ತಲೆಮಾರಿನ ಮಕ್ಕಳು ಸಾಕಷ್ಟು ತಿಳಿದುಕೊಂಡಿದ್ದಾರೆ. ಇಂಥ ಅಭಿಯಾನದ ಹಿಂದಿರುವ ಉದ್ದೇಶ ಅವರಿಗೆ ತಿಳಿಯುತ್ತದೆ’ ಎಂದು ಪೀಠ ಹೇಳಿದೆ.
ಸಹಿ ಅಭಿಯಾನ ಕೈಗೊಳ್ಳುವುದು ಎಲ್ಲಾ ಪಕ್ಷಗಳ ಹಕ್ಕು. ಆದರೆ ಈ ರೀತಿಯ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ನ್ಯಾಯಪೀಠ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.