ADVERTISEMENT

ಸಂಸತ್‌ ಕ್ಯಾಂಟೀನ್‌ಗಳಲ್ಲಿ ಸಬ್ಸಿಡಿ ಸ್ಥಗಿತ

ವಾರ್ಷಿಕವಾಗಿ ₹8 ಕೋಟಿ ಉಳಿತಾಯ ಸಾಧ್ಯತೆ

ಪಿಟಿಐ
Published 19 ಜನವರಿ 2021, 15:19 IST
Last Updated 19 ಜನವರಿ 2021, 15:19 IST
ಓಂ ಬಿರ್ಲಾ
ಓಂ ಬಿರ್ಲಾ   

ನವದೆಹಲಿ: ಸಂಸತ್‌ ಕ್ಯಾಂಟೀನ್‌ಗಳಲ್ಲಿ ಸಂಸದರಿಗೆ ಮತ್ತು ಇತರರಿಗೆ ನೀಡುತ್ತಿದ್ದ ಆಹಾರಗಳ ಮೇಲಿನ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಮಂಗಳವಾರ ತಿಳಿಸಿದರು.

ಸಬ್ಸಿಡಿ ಸ್ಥಗಿತಗೊಳಿಸಿರುವುದರಿಂದ ಆಗುವ ಉಳಿತಾಯದ ಬಗ್ಗೆ ಬಿರ್ಲಾ ಅವರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ವಾರ್ಷಿಕವಾಗಿ ₹8 ಕೋಟಿ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

ಜ.29ರಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನದ ಸಿದ್ಧತೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಬಿರ್ಲಾ, ‘ಮುಂದಿನ ದಿನಗಳಲ್ಲಿ ಸಂಸತ್‌ ಕ್ಯಾಂಟೀನ್‌ಗಳನ್ನು ಉತ್ತರ ರೈಲ್ವೆ ಬದಲು ಐಟಿಡಿಸಿ ನಡೆಸಲಿದೆ’ ಎಂದರು.

ADVERTISEMENT

ಕೋವಿಡ್‌ ಪರೀಕ್ಷೆ ಕಡ್ಡಾಯ: ‘ಬಜೆಟ್‌ ಅಧಿವೇಶನ ಆರಂಭವಾಗುವ ಮುನ್ನ ಎಲ್ಲ ಸಂಸತ್‌ ಸದಸ್ಯರು ಕೋವಿಡ್‌–19 ಪರೀಕ್ಷೆಗೆ ಒಳಪಡಬೇಕು. ರಾಜ್ಯಸಭೆಯು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದ್ದು, ಲೋಕಸಭೆಯು ಸಂಜೆ ನಾಲ್ಕರಿಂದ 8 ಗಂಟೆಯವರೆಗೆ ನಡೆಯಲಿದೆ. ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಎಂದಿನಂತೆ ಇರಲಿದ್ದು, ಇದಕ್ಕೆ ಒಂದು ಗಂಟೆ ಮೀಸಲಿರಿಸಲಾಗುವುದು.

ಸಂಸದರ ನಿವಾಸದ ಬಳಿಯೇ ಆರ್‌ಟಿಪಿಸಿಆರ್‌ ಕೋವಿಡ್‌–19 ಪರೀಕ್ಷೆಗೆ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಸಂಸತ್‌ ಆವರಣದಲ್ಲಿ ಜ.27 ಹಾಗೂ ಜ.28ರಂದು ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ನಡೆಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂತಿಮಗೊಳಿಸಿದ ಲಸಿಕಾ ಅಭಿಯಾನ ನೀತಿಯು ಸಂಸತ್‌ ಸದಸ್ಯರಿಗೂ ಅನ್ವಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.