ADVERTISEMENT

ಕೇರಳ ಕರಾವಳಿಯಲ್ಲಿ ದಿಢೀರ್‌ ದೈತ್ಯ ಅಲೆಗಳು

ರಸ್ತೆ, ಮನೆಗಳು, ದೋಣಿಗಳಿಗೆ ಹಾನಿ: ಜನರಿಗೆ ಆಘಾತ

ಪಿಟಿಐ
Published 1 ಏಪ್ರಿಲ್ 2024, 16:26 IST
Last Updated 1 ಏಪ್ರಿಲ್ 2024, 16:26 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ತಿರುವನಂತಪುರ: ತಿರುವನಂತಪುರ ಸೇರಿದಂತೆ ಕೇರಳದ ಹಲವಾರು ಕರಾವಳಿ ಜಿಲ್ಲೆಗಳಲ್ಲಿ ಭಾನುವಾರ ಇದ್ದಕ್ಕಿದ್ದಂತೆ ದೈತ್ಯಾಕಾರದ ಅಲೆಗಳು ಭುಗಿಲೆದ್ದಿದ್ದು, ಸ್ಥಳೀಯ ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದ ಸ್ಥಳೀಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಹಲವರ ಮನೆಗಳಿಗೆ ನೀರು ನುಗ್ಗಿದೆ.  

ಪ್ರಸಿದ್ಧ ಪ್ರವಾಸಿ ತಾಣವಾದ ಪೂವರ್‌ ಮತ್ತು ಸುತ್ತಮುತ್ತಲಿನ ಗ್ರಾಮಗಳು ಭಾನುವಾರ ಸಂಪೂರ್ಣ ಜಲಾವೃತಗೊಂಡಿದ್ದವು. ಸೋಮವಾರದ ವೇಳೆಗೆ ಗ್ರಾಮಗಳಿಂದ ನೀರು ಇಳಿಮುಖವಾಗಿದ್ದರೂ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದವು. ಏ.4ರ ವರೆಗೂ ಇದೇ ರೀತಿ ಅಲೆಗಳು ಮುಂದುವರೆಯುವ ನಿರೀಕ್ಷೆ ಇದೆ ಎನ್ನಲಾಗಿದೆ. 

ತಿರುವನಂತಪುರ ಬಳಿಯ ಪೊಳಿಯೂರಿನಲ್ಲಿ 100ಕ್ಕೂ ಹೆಚ್ಚು ಕುಟುಂಬಗಳ ಮನೆಗಳಿಗೆ ಅಲೆಗಳಿಂದ ಹಾನಿಯಾಗಿದೆ. ದೋಣಿಗಳು ಮತ್ತು ಬಲೆಗಳೂ ಹಾನಿಗೊಳಗಾಗಿದ್ದರಿಂದ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಈ ಭಾಗದ ಕರಾವಳಿ ರಸ್ತೆ ಸಂಪೂರ್ಣ ಹಾಳಾಗಿದೆ. 

ADVERTISEMENT

ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ನಿರಾಶ್ರಿತರಿಗಾಗಿ ಶಿಬಿರವನ್ನು ತೆರೆಯಲಾಗಿದ್ದು, ಅಲ್ಲಿ 24 ಕುಟುಂಬಗಳು ಆಶ್ರಯ ಪಡೆದುಕೊಂಡಿವೆ. 

‘ದೈತ್ಯಾಕಾರದ ಅಲೆಗಳು ಅಪ್ಪಳಿಸಿದ್ದು, ಸುನಾಮಿಯಂತೆ ಇತ್ತು. ಅಧಿಕಾರಿಗಳು ನಮಗೆ ಎಚ್ಚರಿಕೆಯನ್ನೂ ನೀಡಿರಲಿಲ್ಲ. ನಾವು ನಮ್ಮ ಪ್ರಾಣ ಕಾಪಾಡಿಕೊಳ್ಳಲು ಹರಸಾಹಸ ಪಟ್ಟೆವು’ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.