
ಎ.ಆರ್. ರೆಹಮಾನ್
(ಇನ್ಸ್ಟಾಗ್ರಾಂ ಚಿತ್ರ)
ನವದೆಹಲಿ: ‘ಪೊನ್ನಿಯಿನ್ ಸೆಲ್ವನ್–2’ ಸಿನಿಮಾದ ‘ ವೀರ ರಾಜ ವೀರ’ ಹಾಡಿನಲ್ಲಿ ದಗರ್ವಾನಿ ಸಂಪ್ರದಾಯದ ಕೊಡುಗೆ ಇರುವುದನ್ನು ಒಪ್ಪಿಕೊಳ್ಳಿ ಎಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಿನಿಮಾ ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರು ಇದ್ದ ಪೀಠವು 2025ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವೊಂದನ್ನು ಪ್ರಶ್ನಿಸಿ ದ್ರುಪದ್ ರಾಗ (ಹಿಂದೂಸ್ತಾನಿ ಸಂಗೀತದ ಒಂದು ರಾಗ) ಮಾಂತ್ರಿಕ ಉಸ್ತಾದ್ ಫಯಾಜ್ ವಾಸಿಫುದ್ದೀನ್ ದಗಾರ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು.
ಫಯಾಜುದ್ದೀನ್ ದಾಗರ್, ಜಹೀರುದ್ದೀನ್ ದಾಗರ್ ಅವರ ಪುತ್ರ ಫಯಾಜ್ ಅವರು ‘ಶಿವ ಸ್ತುತಿ’ ಸೇರಿ ದಾಗರ್ ಸೋದರರ ಎಲ್ಲ ಮೂಲ ಸಂಯೋಜನೆಗಳ ಮೇಲೆ ಹಕ್ಕುಸ್ವಾಮ್ಯ ಇದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು.
‘ನೀವು ಅದರ ಸೃಷ್ಟಿಕರ್ತರೇ, ದಾಗರ್ ಸಂಪ್ರದಾಯದಿಂದ ಪಡೆದಿರುವಿರೇ ಅಥವಾ ಮೊದಲ ಬಾರಿಗೆ ಹಾಡಿರುವಿರೇ ಎಂಬುದು ಇಲ್ಲಿನ ವಿಚಾರವಾಗಿದೆ’ ಎಂದು ಪೀಠ ಹೇಳಿದೆ.
‘ ಪ್ರಸ್ತುತ ರಾಗಸಂಯೋಜನೆ ಮೇಲೆ ಹಕ್ಕುಸ್ವಾಮ್ಯ ಅಪೇಕ್ಷಿಸುತ್ತಿದ್ದೇವೆ. ನನ್ನ ತಂದೆ ಮತ್ತು ಸೋದರ ಇದರ ಕರ್ತೃಗಳು. ರಾಗಸಂಯೋಜನೆಗಷ್ಟೇ ನಾನು ಹಕ್ಕುಸ್ವಾಮ್ಯ ಬಯಸುತ್ತಿದ್ದೇವೆ’ ಎಂದು ದಾಗರ್ ಪರವಾಗಿ ವಕೀಲರು ವಾದಿಸಿದರು.
‘ರಾಗದ ಮೂಲವೇ ಈಗ ವಿವಾದವಾಗಿದೆ. ಈ ಘರಾಣಾಗಳು (ರಾಗಪ್ರಾಕಾರ) ಶಾಸ್ತ್ರೀಯ ಸಂಗೀತಕ್ಕೆ ಕೊಡುಗೆ ನೀಡಿಲ್ಲ ಎನ್ನುವುದಾದರೆ ಇತ್ತೀಚಿನ ಹಾಡುಗಾರರು ಅವುಗಳನ್ನು ನಿರ್ವಹಿಸಬಹುದೇ’ ಎಂದು ರೆಹಮಾನ್ ಪರ ವಕೀಲ ಅಭಿಷೇಕ್ ಸಿಂಘ್ವಿ ಅವರನ್ನು ಪೀಠ ಕೇಳಿತು.
‘ಈ ಹಿಂದಿನ ರಾಗ ಪ್ರಸ್ತುತಿ ವೇಳೆ ಇಂತಹ ಆಕ್ಷೇಪ ವ್ಯಕ್ತವಾಗಿರಲಿಲ್ಲ’ ಎಂದು ಸಿಂಘ್ವಿ ಸ್ಪಷ್ಟಪಡಿಸಿದರು.
‘ಅವರು ಶಾಸ್ತ್ರೀಯ ಸಂಗೀತದ ಸಾಂಪ್ರದಾಯಿಕ ಆರಾಧಕರು. ಅವರು ಸ್ಪರ್ಧೆಗೆ ನಿಂತಿಲ್ಲ. ಗೌರವ ಮತ್ತು ಗುರುತಿಸುವಿಕೆಯನ್ನಷ್ಟೇ ಬಯಸಿದ್ದಾರೆ. ಈ ರಾಗದ ಬಗ್ಗೆ ನಿಮಗೆ ಅರಿವಿದೆಯೇ?' ಎಂದು ಪೀಠ ಪ್ರಶ್ನಿಸಿತು.
ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಮಯಬೇಕು ಎಂದು ಸಿಂಘ್ವಿ ಅವರು ಮನವಿ ಮಾಡಿದ್ದರಿಂದ ಫೆಬ್ರುವರಿ 20ಕ್ಕೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.