ನವದೆಹಲಿ: ಅಧ್ಯಕ್ಷರು, ನ್ಯಾಯಾಂಗ ಮತ್ತು ತಾಂತ್ರಿಕ ಸದಸ್ಯರಿಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿರುವ ನ್ಯಾಯಮಂಡಳಿಗಳಿಗೆ ಎರಡು ವಾರಗಳಲ್ಲಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಹೀಗೆ ನೇಮಕಾತಿ ಮಾಡುವುದಕ್ಕಾಗಿ ಶಿಫಾರಸು ಮಾಡಲಾದ ಪಟ್ಟಿಯಲ್ಲಿನ ವ್ಯಕ್ತಿಗಳನ್ನು ಕೈಬಿಟ್ಟಿದ್ದರೆ ಅದಕ್ಕೆ ಕಾರಣವನ್ನೂ ನೀಡಬೇಕು ಎಂದು ತಾಕೀತು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠವು, ದೇಶದಾದ್ಯಂತ ಅರೆ ನ್ಯಾಯಾಂಗ ಸಂಸ್ಥೆಗಳಲ್ಲಿ ಭರ್ತಿಯಾಗದ ಹುದ್ದೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಸಿಬ್ಬಂದಿಯಿಲ್ಲದೆ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿ ಈ ನ್ಯಾಯಮಂಡಳಿಗಳಿವೆ ಎಂದು ಬೇಸರ ವ್ಯಕ್ತಪಡಿಸಿತು.
‘ಆಯ್ಕೆ ಸಮಿತಿಯಿಂದ ಶಿಫಾರಸು ಮಾಡಲಾದ ವ್ಯಕ್ತಿಗಳ ಪಟ್ಟಿಯಿಂದ ಎರಡು ವಾರಗಳಲ್ಲಿ ಕೇಂದ್ರ ಸರ್ಕಾರವು ನ್ಯಾಯಮಂಡಳಿಗಳಿಗೆ ನೇಮಕಾತಿ ಮಾಡಲಿದೆ’ ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಪೀಠಕ್ಕೆ ಭರವಸೆ ನೀಡಿದರು.
ವಿವಿಧ ಪ್ರಮುಖ ನ್ಯಾಯಮಂಡಳಿಗಳು ಮತ್ತು ಮೇಲ್ಮನವಿ ನ್ಯಾಯಮಂಡಳಿಗಳಲ್ಲಿ ಸುಮಾರು 250 ಹುದ್ದೆಗಳು ಖಾಲಿ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.