ADVERTISEMENT

ಅರಾವಳಿ ಶ್ರೇಣಿಗಳ ವ್ಯಾಖ್ಯಾನಕ್ಕೆ ತಜ್ಞರ ಹೆಸರು ಸೂಚಿಸಿ: ಸುಪ್ರೀಂ ಕೋರ್ಟ್

ಪಿಟಿಐ
Published 26 ಫೆಬ್ರುವರಿ 2026, 15:34 IST
Last Updated 26 ಫೆಬ್ರುವರಿ 2026, 15:34 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಅರಾವಳಿ ಪರ್ವತ ಶ್ರೇಣಿಗಳ ವ್ಯಾಖ್ಯಾನ ಯಾವ ರೀತಿ ಇರಬೇಕು ಎಂಬ ಕುರಿತು ಪರಿಶೀಲನೆ ನಡೆಸುವ ಸಮಿತಿಗೆ ವಿಷಯ ತಜ್ಞರ ಹೆಸರು ಸೂಚಿಸುವಂತೆ ಕೇಂದ್ರ ಪರಿಸರ ಸಚಿವಾಲಯ ಮತ್ತು ಇತರ ಭಾಗೀದಾರರನ್ನು ಸುಪ್ರೀಂ ಕೋರ್ಟ್‌ ಗುರುವಾರ ಕೇಳಿಕೊಂಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿಪುಲ್‌ ಎಂ. ಪಂಚೋಲಿ ಅವರ ಪೀಠವು, ‘ಈ ಪ್ರದೇಶದಲ್ಲಿ ಕಾನೂನುಬದ್ಧ ಗಣಿಗಾರಿಕೆಯನ್ನು ಮಾತ್ರ ಅನುಮತಿಸಲಾಗುವುದು’ ಎಂದು ಹೇಳಿತು. 

ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನ ಬದಲಿಸಿರುವ ಕೇಂದ್ರ ಸರ್ಕಾರದ ಕ್ರಮದ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ಹೊಸ ವ್ಯಾಖ್ಯಾನ ಹೇಗಿರಬೇಕು ಎಂಬುದನ್ನು ನಿರ್ಧರಿಸಲು ತಜ್ಞರ ಸಮಿತಿ ರಚಿಸುವುದಾಗಿ ಜನವರಿ 21ರಂದು ಹೇಳಿತ್ತು.

ADVERTISEMENT

ಗುರುವಾರ ವಿಚಾರಣೆ ವೇಳೆ ಕಕ್ಷಿದಾರರ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ‘ಗಣಿಗಾರಿಕೆ ನಡೆಸುವ ಕಂಪನಿಯು ಗಣಿಗಾರಿಕೆ ಪರವಾನಗಿಯನ್ನು ಹೊಂದಿದ್ದು, ಸುದೀರ್ಘ ಹೋರಾಟದ ನಂತರ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದುಕೊಂಡಿದೆ. ಇದೀಗ, ನ್ಯಾಯಾಲಯದ ಆದೇಶದಿಂದಾಗಿ ಗಣಿಗಾರಿಕೆ ಸ್ಥಗಿತಗೊಂಡಿದೆ’ ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ‘ನಾವು ಕಾನೂನುಬದ್ಧ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡುತ್ತೇವೆ. ಹೊಸ ವ್ಯಾಖ್ಯಾನ ಏನು ಎಂಬುದನ್ನು ತಜ್ಞರ ಸಮಿತಿ ನಮಗೆ ತಿಳಿಸಲಿ. ಆ ಬಳಿಕವಷ್ಟೇ ನಾವು ಎಲ್ಲ ಅಡೆತಡೆಗಳನ್ನು ದಾಟಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

ಈ ಪ್ರಕರಣದ ವಿಚಾರಣೆಯಲ್ಲಿ ತನಗೆ ಸಹಾಯ ಮಾಡುವಂತೆ ವಕೀಲ ಜಯ್ ಚೀಮಾ ಅವರನ್ನು ಪೀಠ ಕೇಳಿಕೊಂಡಿತು. ಹಿರಿಯ ವಕೀಲ ಕೆ. ಪರಮೇಶ್ವರ ಅವರು ಈಗಾಗಲೇ ಅಮಿಕಸ್ ಕ್ಯೂರಿಯಾಗಿ ಪೀಠಕ್ಕೆ ನೆರವಾಗುತ್ತಿದ್ದಾರೆ.

‘ಸಮಿತಿ ರಚಿಸಲಿಕ್ಕಾಗಿ ವಿಷಯ ತಜ್ಞರ ಹೆಸರನ್ನು ಅವರ ವ್ಯಕ್ತಿ ಪರಿಚಯದೊಂದಿಗೆ ನೀಡಲು ಪರಿಸರ ಸಚಿವಾಲಯವನ್ನು ಕೇಳಿಕೊಳ್ಳುತ್ತೇವೆ. ಕೆಲವು ತಜ್ಞರ ಹೆಸರು ಸೂಚಿಸುವಂತೆ ಹಿರಿಯ ವಕೀಲರನ್ನೂ ಕೋರಲಾಗಿದೆ’ ಎಂದು ಪೀಠ ಹೇಳಿತು.

‘ಪರವಾನಗಿ ಹೊಂದಿರುವ ಕಂಪನಿಗಳು ನಡೆಸುತ್ತಿದ್ದ ಗಣಿಗಾರಿಕೆ ಚಟುವಟಿಕೆಗಳೂ ಸ್ಥಗಿತಗೊಂಡಿದೆ ಎಂಬುದರ ಅರಿವು ನಮಗಿದೆ. ಕೆಲವೊಂದು ಪ್ರಾಥಮಿಕ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗುತ್ತದೆ’ ಎಂದು ಸಿಜೆಐ ಹೇಳಿದರು.