ADVERTISEMENT

ಗುತ್ತಿಗೆ ಪ್ರದೇಶದ ಗಡಿ ನಿರ್ಧರಿಸಲು ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌

ಕರ್ನಾಟಕ, ಆಂಧ್ರಪ್ರದೇಶ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ

ಪಿಟಿಐ
Published 25 ಸೆಪ್ಟೆಂಬರ್ 2025, 15:34 IST
Last Updated 25 ಸೆಪ್ಟೆಂಬರ್ 2025, 15:34 IST
–
   

ನವದೆಹಲಿ: ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿ ಗಣಿಗಾರಿಕೆಗೆ ಗುತ್ತಿಗೆ ನೀಡಿರುವ ಪ್ರದೇಶ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಗಡಿಗಳನ್ನು ಗುರುತಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಯನ್ನು ರಚಿಸಿದೆ.

ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸುಪ್ರೀಂ ಕೋರ್ಟ್‌, ಈ ಸಮಿತಿಗೆ ಸೂಚಿಸಿದೆ.

ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಎಷ್ಟು ಭೂಪ್ರದೇಶವನ್ನು ಒತ್ತುವರಿ ಮಾಡಲಾಗಿದೆ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವೆಷ್ಟು ಹಾಗೂ ಇತರ ಅಕ್ರಮ ಚಟುವಟಿಕೆಗಳನ್ನು ಈ ಸಮಿತಿ ಕಂಡುಹಿಡಿಯಲಿದೆ.

ADVERTISEMENT

ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಹಾಗೂ ಎನ್‌.ವಿ.ಅಂಜಾರಿಯಾ ನೇತೃತ್ವದ ಪೀಠವು, ಈ ಕುರಿತು ಆಂಧ್ರಪ್ರದೇಶ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ನೀಡಿದ್ದ ಸಲಹೆ ಪರಿಗಣಿಸಿ, ಈ ಸಮಿತಿಯನ್ನು ರಚಿಸಿದೆ.

ಆಂಧ್ರಪ್ರದೇಶದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಹಾಗೂ ಆಯುಕ್ತರು ನೀಡಿದ್ದ ವರದಿಯನ್ನು ವಕೀಲ ಲೂಥ್ರಾ ಅವರು ಸೆ‍ಪ್ಟೆಂಬರ್ 18ರಂದು ನಡೆದಿದ್ದ ವಿಚಾರಣೆ ವೇಳೆ ಪೀಠಕ್ಕೆ ಸಲ್ಲಿಸಿ, ಸಮಿತಿ ರಚನೆ ಕುರಿತು ಮನವಿ ಮಾಡಿದ್ದರು.

ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಓಬುಳಾಪುರಂ ಮೈನಿಂಗ್ ಕಂಪನಿ ಹಾಗೂ ಇತರರು, ಈ ಮನವಿಯನ್ನು ವಿರೋಧಿಸಿದ್ದರು.

‘ಒಪ್ಪಂದದ ಪ್ರಕಾರ, ಗಣಿಗಾರಿಕೆಗಾಗಿ ಗುತ್ತಿಗೆ ನೀಡಲಾಗಿರುವ ಪ್ರದೇಶದ ಗಡಿಗಳನ್ನು ಮಾತ್ರ ಗುರುತಿಸಬೇಕಿದೆ. ಆದರೆ, ರಾಜ್ಯ ಸರ್ಕಾರವು ಈ ಒಪ್ಪಂದದ ವ್ಯಾಪ್ತಿ ಮೀರಿದ ಪ್ರಕ್ರಿಯೆ ಕೈಗೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಕಂಪನಿ ಹಾಗೂ ಇತರರು ಪೀಠಕ್ಕೆ ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠ,‘ರಾಜ್ಯ ಸರ್ಕಾರ ಮತ್ತು ಪ್ರತಿವಾದಿಗಳ ನಡುವಿನ ವಿವಾದಿತ ಸಂಗತಿಗಳ ಕುರಿತು ನಾವು ವಿಚಾರಣೆ ಮಾಡಲು ಬಯಸುವುದಿಲ್ಲ. ಈ ಪ್ರಕರಣದಲ್ಲಿ ನ್ಯಾಯಸಮ್ಮತ ವಿಚಾರಗಳನ್ನಷ್ಟೆ ಪರಿಗಣಿಸಲಾಗುವುದು. ಹಾಗಾಗಿ, ಅರ್ಜಿದಾರರ (ಆಂಧ್ರಪ್ರದೇಶ ಸರ್ಕಾರ) ಸಲಹೆಯನ್ನು ಪರಿಗಣಿಸಿ, ಸಮಿತಿಯೊಂದನ್ನು ರಚಿಸಲು ಒಲವು ಹೊಂದಿದ್ದೇವೆ’ ಎಂದು ಪೀಠ ಸ್ಪಷ್ಟಪಡಿಸಿತ್ತು.

ಸಮಿತಿಯು ಅಂತಿಮ ವರದಿ ಸಿದ್ಧಪಡಿಸುವುದಕ್ಕೂ ಮುನ್ನ, ಪ್ರತಿವಾದಿಗಳು ಸೇರಿದಂತೆ ಎಲ್ಲ ಕಕ್ಷಿದಾರರ ಹೇಳಿಕೆಗಳನ್ನು ಪಡೆಯಬೇಕು ಎಂದೂ ಪೀಠ ತಿಳಿಸಿತ್ತು.

ಕರ್ನಾಟಕ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ನಿಶಾಂತ ಪಾಟೀಲ ಹಾಗೂ ವಕೀಲ ಡಿ.ಎಲ್.ಚಿದಾನಂದ ಹಾಜರಿದ್ದರು.

- ಸಮಿತಿ ಸದಸ್ಯರು ಯಾರು?

ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಉನ್ನತಾಧಿಕಾರ ಸಮಿತಿ ಸದಸ್ಯರ ವಿವರ ಹೀಗಿದೆ. ಆಂಧ್ರಪ್ರದೇಶದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪರಿಸರ ಅರಣ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿ ಅಥವಾ ಈ ಇಲಾಖೆಗಳಿಂದ ನಾಮನಿರ್ದೇಶಿತವಾದ ಅಧಿಕಾರಿ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಾಮನಿರ್ದೇಶಿತ ಅಧಿಕಾರಿ ಈ ಸಮಿತಿ ಸದಸ್ಯರಾಗಿರುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.