ನವದೆಹಲಿ:ರೈತ ನಾಯಕರಾದ ರಾಕೇಶ್ ಟಿಕಾಯತ್ ಮತ್ತು ಯೋಗೇಂದ್ರ ಯಾದವ್ ಸೇರಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿವಿಧ ರೈತ ಸಂಘಟನೆಗಳ 43 ರೈತ ನಾಯಕರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ನೀಡಿದೆ.
ರಸ್ತೆ ತಡೆ ಮಾಡುತ್ತಿರುವುದರಿಂದ ದೆಹಲಿ ಮತ್ತು ನೋಯ್ಡಾ ನಡುವೆ ಸಂಚಾರ ಮಾಡುವುದು ಪ್ರಯಾಸದಾಯಕವಾಗಿದೆ ಎಂದು ನೋಯ್ಡಾ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಕೋರಿ ಹರಿಯಾಣ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್
ಕೌಲ್ ಮತ್ತು ಎಂ. ಎಂ. ಸುಂದ್ರೇಶ್ ಅವರಿದ್ದ ಪೀಠ ಈ ಕುರಿತು ರೈತ ನಾಯಕರ ಪ್ರತಿಕ್ರಿಯೆಯನ್ನು ಕೇಳಿದೆ.
ರೈತರ ಜೊತೆ ಮಾತುಕತೆ ನಡೆಸಲು ಹರಿಯಾಣ ಸರ್ಕಾರ ಸಮಿತಿ ರಚಿಸಿದೆ. ಆದರೆ ರೈತರು ಮಾತುಕತೆಗೆ ಬರಲು ನಿರಾಕರಿಸುತ್ತಿದ್ದಾರೆ. ನೋಟಿಸ್ ಜಾರಿ ಮಾಡಿದರೆ ಮಾತುಕತೆಗೆ ಬರಲು ನಿರಾಕರಿಸಲು ಸಾಧ್ಯವಿಲ್ಲ ಎಂದು ಹರಿಯಾಣ ಸರ್ಕಾರದ ಪರವಾಗಿ ಕೋರ್ಟ್ಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಹರಿಯಾಣ ಸರ್ಕಾರದ ವಾದ ಆಲಿಸಿದ ಕೋರ್ಟ್ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ರೈತ ನಾಯಕರಿಗೆ ಹೇಳಿದೆ. ಮುಂದಿನ ವಿಚಾರಣೆಯನ್ನು ಅ.20ಕ್ಕೆ ಕಾಯ್ದಿರಿಸಿದೆ.
ಶಹೀನ್ ಬಾಗ್ ಹೋರಾಟಕ್ಕೆ ಸಂಬಂಧಿಸಿಂತೆ 2020ರ ಅ.7ರಂದು ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಕೋರ್ಟ್, ರಸ್ತೆಗಳನ್ನು ನಿರಂತರವಾಗಿ ಆಕ್ರಮಿಸಿಕೊಳ್ಳುವಂತಿಲ್ಲ ಎಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.