ADVERTISEMENT

‘ಉದ್ಯಮ‘ ವ್ಯಾಖ್ಯಾನ: ಸಾಂವಿಧಾನಿಕ ಪೀಠದಿಂದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 16:43 IST
Last Updated 16 ಫೆಬ್ರುವರಿ 2026, 16:43 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: 2020ರ ಕೈಗಾರಿಕಾ ಸಂಬಂಧ ಸಂಹಿತೆ ಮತ್ತು 1947ರ ಕೈಗಾರಿಕಾ ವಿವಾದ ಕಾಯ್ದೆಯ ಅಡಿಯಲ್ಲಿ ‘ಉದ್ಯಮ‘ದ ವ್ಯಾಖ್ಯಾನ ನಿರ್ಧರಿಸಲು ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಹಾಗೂ ವಿ.ಎಂ. ಪಂಚೋಲಿ ಅವರ ಪೀಠವು, ‘ಸಂವಿಧಾನ ಪೀಠವು ಮಾರ್ಚ್‌ 17 ಹಾಗೂ 18ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಅರ್ಜಿದಾರರು ಹಾಗೂ ಪ್ರತಿವಾದಿಗಳು ಇದೇ 28ರೊಳಗೆ ಈಗಿರುವ ಆಕ್ಷೇಪಣೆಗಳಿಗೆ ಇನ್ನಷ್ಟು ಅಂಶ ಸೇರಿಸಿ ಹೊಸದಾಗಿ ಸಲ್ಲಿಸಬಹುದು ಹಾಗೂ ಹೆಚ್ಚುವರಿಯಾಗಿ ಹೊಸ ಆಕ್ಷೇಪಣೆಗಳನ್ನು ಸಲ್ಲಿಸಬಹುದು’ ಎಂದು ತಿಳಿಸಿತು.

ಬೆಂಗಳೂರು ಜಲಮಂಡಳಿ ವರ್ಸಸ್‌ ಎ. ರಾಜಪ್ಪ ಪ್ರಕರಣದಲ್ಲಿ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್‌ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠವು 1978ರಲ್ಲಿ ತೀರ್ಪು ನೀಡಿ ‘ಉದ್ಯಮ’ಕ್ಕೆ ವಿಶಾಲ ಅರ್ಥ ನೀಡಿತ್ತು. ಸರ್ಕಾರಿ ಉದ್ಯಮಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ವೃತ್ತಿಪರ ಸೇವೆಗಳು ಹಾಗೂ ಕ್ಲಬ್‌ಗಳನ್ನೂ ಸೇರಿಸಿ ಉದ್ಯಮಕ್ಕೆ ವಿಸ್ತೃತ ವ್ಯಾಖ್ಯಾನ ನೀಡಿತ್ತು. ಇದು ಕಾರ್ಮಿಕರ ಹಕ್ಕುಗಳಿಗೆ ವ್ಯಾಪಕ ರಕ್ಷಣೆ ನೀಡುವಂತಹ ವ್ಯಾಖ್ಯಾನವಾಗಿತ್ತು. 

ADVERTISEMENT

ಉತ್ತರ ಪ್ರದೇಶ ವರ್ಸಸ್‌ ಜೈ ಬೀರ್ ಸಿಂಗ್‌ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠವು ಜಲಮಂಡಳಿ ಪ್ರಕರಣವನ್ನು 2005ರಲ್ಲಿ ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಈ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠವು 2017ರಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠಕ್ಕೆ ಉಲ್ಲೇಖಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.